ನನ್ನ ಬಗ್ಗೆ ಒಂದಿಷ್ಟು ಒಳ್ಳೆಯದು ಬರೆದರೆ ಏನಾಗುತ್ತದೆ?

Update: 2020-03-14 18:33 GMT

ಕೊರೋನ ವೈರಸ್ ಗದ್ದಲಗಳಿಂದಾಗಿ ಅಘೋಷಿತ ಬಂದ್‌ಗಳು ನಡೆಯುತ್ತಿರುವುದರಿಂದ ಪತ್ರಕರ್ತ ಎಂಜಲು ಕಾಸಿಗೆ ಸಂದರ್ಶನ ಮಾಡಲು ಯಾರೂ ಸಿಗುತ್ತಿರಲಿಲ್ಲ.

ಅಂಬಾನಿಯ ಮನೆಯ ಹೊರಗೆ ಕಾವಲು ಕಾಯುತ್ತಿರುವ ಚೌಕೀದಾರ್‌ಗೆ ಫೋನ್ ಮಾಡಿ ‘‘ಸಾರ್...ನಿಮ್ಮನ್ನೊಂದು ಇಂಟರ್ಯ್ಯೂ ಮಾಡಿದರೆ ಹೇಗೆ?’’ ಎಂದು ಕೇಳಿದ್ದ.

‘‘ಬೇಡ ಬೇಡ. ಆ ಟ್ರಂಪ್‌ರನ್ನು ಮುಟ್ಟಿದ ಅದ್ಯಾರಿಗೋ ಕೊರೋನ ಬಂದಿದೆಯಂತೆ...ನಾನೀಗ ಗುಪ್ತ ವೈದ್ಯರ ಮಧ್ಯೆ ಇದ್ದೇನೆ...’’ ಎಂದು ನಿರಾಕರಿಸಿದ್ದ.

ಸಂದರ್ಶನಕ್ಕೆ ಹಾತೊರೆಯುತ್ತಿದ್ದವರೆಲ್ಲ ಕೊರೊನಾಕ್ಕೆ ಹೆದರಿ ಮನೆಯೊಳಗೆ ಅಡಗಿ ಕೂತಿದ್ದರು. ಬೀದಿಯೆಲ್ಲ ಬಿಕೋ ಅನ್ನಿಸುತ್ತಿತ್ತು. ಸುಮ್ಮನೆ ನಡೆಯುತ್ತಾ ಮುಂದೆ ಸಾಗ ತೊಡಗಿದ. ‘ಹಲೋ...’ ಯಾರೋ ಕರೆದಂತಾಯಿತು. ಎಲ್ಲಿ ಎಂದು ಗೊತ್ತಾಗಲಿಲ್ಲ.

‘‘ಸಾರ್ ನನ್ನದೊಂದು ಸಂದರ್ಶನ ಮಾಡುತ್ತೀರಾ...?’’ ಹೆಣ್ಣು ಧ್ವನಿ. ಕಾಸಿ ಕುತೂಹಲದಿಂದ ಅತ್ತಿತ್ತ ನೋಡಿದ. ನೋಡಿದರೆ ಮರದ ಮರೆಯಲ್ಲಿ ಒಬ್ಬ ಸುಂದರ ಹುಡುಗಿ ನಿಂತಿದ್ದಳು. ಅತ್ತ ನಡೆದ. ಹುಡುಗಿ ಗಾಬರಿಯಿಂದ ಹೇಳಿದಳು ‘‘ಹತ್ತಿರ ಬರಬೇಡಿ....’’

‘‘ಯಾಕೆ ನಿನಗೆ ಕೊರೋನ ರೋಗ ಇದೆಯಾ....’’ ಕಾಸಿ ಆತಂಕದಿಂದ ಕೇಳಿದ.

‘‘ನನಗೆ ಯಾವ ರೋಗವೂ ಇಲ್ಲ. ಆದರೆ ಹತ್ತಿರ ಬರಬೇಡಿ....’’

‘‘ಯಾಕೆ ಬಟ್ಟೆ ಹಾಕಿಕೊಂಡಿಲ್ಲವೇ...’’ ಕಾಸಿ ಮತ್ತೆ ಕೇಳಿದ.

‘‘ಛೀ ಪೋಲಿ....ಬಟ್ಟೆ ಹಾಕಿಕೊಂಡಿದ್ದೇನೆ...ಆದರೆ ಹತ್ತಿರಬರಬೇಡಿ...’’ ಹುಡುಗಿ ನಾಚಿ ಹೇಳಿದಳು.

‘‘ಹತ್ತಿರ ಯಾಕೆ ಬರಬಾರದು...ನನಗೆ ಕೊರೊನಾ ಸೋಂಕು ಇಲ್ಲ....’’ ಕಾಸಿ ಹೇಳಿದ.

ಹುಡುಗಿ ಈಗ ಮೆಲ್ಲ ಮರದ ಮರೆಯಿಂದ ಹೊರಬಂದಳು. ನೋಡಿದರೆ ಚೀನಾದಿಂದ ಬಂದ ಹುಡುಗಿಯಂತಿದ್ದಳು.

‘‘ಚೀನಾದಿಂದ ಬಂದದ್ದೋ...’’ ಕಾಸಿ ಆತಂಕದಿಂದ ಕೇಳಿದ.

‘‘ಹೌದು...’’ ಎಂದು ತಲೆಯಾಡಿಸಿದಳು.

‘‘ನಿನ್ನ ಹೆಸರೇನು?’’

‘‘ಕೊರೋನ...’’ ಉತ್ತರ ಕೇಳಿದ್ದೇ ಕಾಸಿ ಬೆಚ್ಚಿ ಬಿದ್ದ ‘‘ಕೊರೋನ...?’’ ಗಲಿಬಿಲಿಯಿಂದ ಕೇಳಿದ.

‘‘ಹೌದು, ನೀವೆಲ್ಲರೂ ನನ್ನ ಬಗ್ಗೆ ಏನೇನೆಲ್ಲ ಗೀಚುತ್ತಿದ್ದೀರಲ್ಲ ಇದು ಸರಿಯಾ?’’

ಕಾಸಿಗೆ ಒಮ್ಮೆ ಓಡಿ ಹೋದರೆ ಹೇಗೆ ? ಅನ್ನಿಸಿತು. ಆದರೆ ಹುಡುಗಿಯನ್ನು ನೋಡುವಾಗ ಪಾಪ ಅನ್ನಿಸಿತು...‘‘ನೀನು ಯಾರು...?’’ ಕಾಸಿ ಸ್ಪಷ್ಟವಾಗದೆ ಕೇಳಿದ.

‘‘ನಾನೇ...ನೀವೆಲ್ಲರೂ ಬಾಯಿಗೆ ಬಂದಂತೆ ನಿಂದಿಸಿ ಬರೆಯುವ ಕೊರೋನ. ಮನುಷ್ಯ ರೂಪ ತಾಳಿದ್ದೇನೆ...ದಯವಿಟ್ಟು ನನ್ನ ಬಗ್ಗೆ ನಾಲ್ಕು ಸಾಲು ಬರೆಯಿರಿ...’’ ಕೊರೋನ ವಿನಂತಿ ಮಾಡಿತು.

‘‘ಇಷ್ಟೆಲ್ಲ ಅನಾಹುತ ಮಾಡಿದ್ದೀಯಾ....ನಿನ್ನ ಮೇಲೆ ಒಳ್ಳೆಯ ನಾಲ್ಕು ಸಾಲು ಹೇಗೆ ಬರೆಯುವುದು?’’ ಕಾಸಿ ಪ್ರಶ್ನಿಸಿದ.

‘‘ನಿಮ್ಮ ಹಾಗೆಯೇ ನಾನು ಕೂಡ ಒಂದು ಜೀವಿ. ನೀವಾಗಿ ನನ್ನನ್ನು ಆಹ್ವಾನಿಸಿಕೊಳ್ಳದೆ ನಾನು ಯಾರ ದೇಹದ ಒಳಗೂ ಹೋಗುವುದಿಲ್ಲ. ನನಗೂ ಬದುಕುವುದಕ್ಕೆ ಜಾಗ ಬೇಡವೆ? ನೀವು ಬದುಕುವುದಕ್ಕಾಗಿ ಪ್ರಾಣಿ, ಸಸ್ಯಗಳನ್ನೆಲ್ಲ ನಾಶ ಮಾಡುತ್ತಿಲ್ಲವೆ. ಅದು ಸರಿಯಾದರೆ ನಾನು ನನ್ನ ಜೀವ ಉಳಿಸಿಕೊಳ್ಳಲು ಯತ್ನಿಸುವುದು ತಪ್ಪು ಹೇಗೆ?’’

ವಾದದಲ್ಲಿ ಹುರುಳಿದೆ ಅನ್ನಿಸಿತು.

‘‘ಆದರೂ ನಿನ್ನಿಂದ ಈ ದೇಶಕ್ಕೆ ಎಷ್ಟೆಲ್ಲ ನಷ್ಟ ಆಗಿದೆ ಗೊತ್ತುಂಟಾ...ನೋಡು...ರಾಜ್ಯದಲ್ಲಿ ಏಳು ದಿನ ಎಲ್ಲ ಬಂದ್...’’ ಕಾಸಿ ವಿವರಿಸಿದ.

‘‘ಓಹೋ...ಹಾಗಾದರೆ ನಾನು ಬರುವ ಮೊದಲು ನೀವು ಬಂದ್ ಮಾಡಿಯೇ ಇಲ್ಲವೇ? ಅದೆಷ್ಟು ರಾಜ್ಯ ಬಂದ್ ಆಗಿವೆ...ಬಸ್‌ಗಳಿಗೆ ಬೆಂಕಿ ಬಿದ್ದಿವೆ...ಕೋಟ್ಯಂತರ ನಷ್ಟ ಆಗಿವೆ...ಅದಕ್ಕೆಲ್ಲ ಯಾರು ಕಾರಣ? ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಮಾಡಿದರೆ ಸರಿ. ನಾನು ನನ್ನ ಅಸ್ತಿತ್ವಕ್ಕಾಗಿ ಮಾಡಿದರೆ ತಪ್ಪೇ?’’ ಕೊರೋನ ಕೇಳಿತು.

‘‘ಆದರೂ ನಿನ್ನಿಂದಾಗಿ ಒಂದು ಅಮಾಯಕ ಜೀವ ಹರಣವಾಗಿದೆ...ಅದಕ್ಕೆ ಯಾರು ಹೊಣೆ?’’ ಕಾಸಿ ಮರು ಪ್ರಶ್ನಿಸಿದ.

‘‘ನೀವು ಮನುಷ್ಯರಿಂದ ಜೀವ ಹಾನಿಯೇ ಆಗಿಲ್ಲವೇ?....’’

‘‘ಆದರೆ ಇನ್ನೊಂದು ಜೀವಿಯ ಸಾವಿಗೆ ಕಾರಣರಾದವರನ್ನು ಹೊಗಳಿ ಬರೆಯುವುದು ಹೇಗೆ?’’

 ‘‘2002ರಲ್ಲಿ ಗುಜರಾತ್‌ನಲ್ಲಿ 2,000 ಜನರು ಹತ್ಯೆಯಾದರಲ್ಲ. ಅವರಲ್ಲಿ ಕೊರೋನ ವೈರಸ್ ಲಕ್ಷಣಗಳಿತ್ತೇ?’’ ಕೊರೋನ ಕೇಳಿತು.

‘‘ಇ...ಇಲ್ಲ....ಅವರು ಕೋಮುಗಲಭೆಯಿಂದ ಸತ್ತರು’’ ಕಾಸಿ ಉತ್ತರಿಸಿದ.

‘‘ಆ ಕೋಮುಗಲಭೆಯ ಹಿಂದಿರುವವರನ್ನು ನೀವು ಪ್ರಧಾನಿ ಮಾಡಿದ್ದೀರಿ....ನನ್ನ ಬಗ್ಗೆ ಒಂದಿಷ್ಟು ಒಳ್ಳೆಯದು ಬರೆದರೆ ಏನಾಗುತ್ತದೆ?’’

ಕಾಸಿ ಉತ್ತರಿಸಲಾಗದೆ ತಲೆತಗ್ಗಿಸಿದ.

‘‘ಸರಿ ಬಿಡಿ...ಮೊನ್ನೆ ದಿಲ್ಲಿಯಲ್ಲಿ 50 ಮಂದಿಯ ಹೆಣ ಚರಂಡಿಯಲ್ಲಿ ಬಿದ್ದು ಸಿಕ್ಕಿತಲ್ಲ....ಅವರಲ್ಲಿ ಕೊರೋನ ಸೋಂಕು ಇತ್ತೇ?’’

ಕಾಸಿ ಮತ್ತೆ ವೌನವಾದ.

‘‘ನಾನ್ಯಾವತ್ತು ಅಷ್ಟು ಬರ್ಬರವಾಗಿ ಯಾರನ್ನೂ ಕೊಂದಿಲ್ಲ. ನನಗೆ ಆಶ್ರಯ ನೀಡಲು ಒಂದು ದೇಹ ಅಷ್ಟೇ ಬೇಕು. ಆ ಒಂದು ಉದ್ದೇಶ ಬಿಟ್ಟರೆ ನನ್ನಲ್ಲಿ ಏನೂ ಇಲ್ಲ....ಯಾರ ಹೆಣವನ್ನು ಚರಂಡಿಯಲ್ಲಿ ಎಸೆಯಲಿಲ್ಲ....ಯಾರ ಮನೆಗೂ ಬೆಂಕಿ ಹಚ್ಚಲಿಲ್ಲ...ಆದರೂ ನನ್ನ ಮೇಲೆಯೇ ಯಾಕೆ ಇಷ್ಟು ದ್ವೇಷ...’’ ಕೊರೋನ ಮತ್ತೆ ಕೇಳಿತು.

‘‘ಆದರೆ ನಿನ್ನನ್ನು ಹೊಗಳಿ ಏನೆಂದು ಬರೆಯಲಿ?’’ ಕಾಸಿ ಗೊಂದಲದಿಂದ ಪ್ರಶ್ನಿಸಿದ.

‘‘ನೋಡಿ....ನೀವು ಸಿಎಎ ಕಾಯ್ದೆ ತಂದಿದ್ದೀರಿ. ಆದರೆ ಅದು ಇಡೀ ದೇಶವನ್ನು ಹಿಂದೂ ಮುಸ್ಲಿಮ್ ಎಂದು ವಿಭಜಿಸಿದೆ. ಆದರೆ ನಾನು ಬಂದು ಈ ದೇಶದ ಎಲ್ಲ ಹಿಂದೂ - ಮುಸ್ಲಿಮರ ನಡುವೆ ಭೇದ ಮಾಡದೆ ಎಲ್ಲರನ್ನು ಸಮಾನವಾಗಿ ಕಂಡೆ. ಹೇಳಿ, ಸಿಎಎ ಕಾಯ್ದೆಗಿಂತ ನಾನು ಒಳ್ಳೆಯವಳಲ್ಲವೇ?’’

ಕಾಸಿ ಹೌದೆಂದು ತಲೆಯಾಡಿಸಿದ ಮತ್ತು ನಿಧಾನವಾಗಿ ಅಲ್ಲಿಂದ ಹೊರಟ. ತುಸು ದೂರ ಹೋಗಿ ಹಿಂದೆ ತಿರುಗಿದರೆ ಅಲ್ಲಿ ಯಾರೂ ಇರಲಿಲ್ಲ.

Similar News