ಮುಂದುವರಿದ ಆಪರೇಷನ್ ಕಮಲ: ಕಾನೂನು ಮತ್ತು ನೈತಿಕತೆಯ ಸಂಘರ್ಷ

Update: 2020-03-21 16:38 GMT

ಯಾಕೆ ಬಿಜೆಪಿ ಇಂತಹ ಹಿಂಬಾಗಿಲಿನ ರಾಜಕೀಯ ಮಾಡಲು ಹೊರಟಿದೆ ಎಂಬ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಲು ಕಷ್ಟ ಪಡಬೇಕಿಲ್ಲ. 2014ರ ನಂತರ ಸತತವಾಗಿ ಒಂದಾದ ಮೇಲೊಂದು ರಾಜ್ಯದ ಚುನಾವಣೆಗಳನ್ನು ಗೆಲ್ಲುತ್ತಾ ಬಂದ ಬಿಜೆಪಿಯ ಆತ್ಮವಿಶ್ವಾಸ ಈಗ ಸಾಕಷ್ಟು ಕುಗ್ಗಿದೆ. ಅದಕ್ಕೆ ಮುಖ್ಯಕಾರಣ ಕೇಂದ್ರ ಸರಕಾರದ ಆಡಳಿತದಿಂದ ಜನ ಭ್ರಮನಿರಸನಗೊಂಡಿರುವುದಾಗಿದೆ. 2018ರ ನಂತರ ನಡೆದ ಆರು ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಸೋತು ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಆದರೆ ಈ ಚುನಾವಣೆಗಳ ಸೋಲಿನಿಂದ ಪಾಠ ಕಲಿಯಬೇಕಿದ್ದ ಬಿಜೆಪಿ ಅದನ್ನು ಬಿಟ್ಟು ಹೇಗಾದರೂ ಮಾಡಿ ಸೋತ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಕಾರ್ಯಕ್ಕೆ ಮುಂದಾಗಿದೆ.


ಅಧಿಕಾರವೆನ್ನುವುದು ಎಲ್ಲ ಸಿದ್ಧಾಂತಗಳನ್ನೂ ಮೀರಿದ್ದು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಬಹುಮತವೇ ಮುಖ್ಯ ಎನ್ನುವುದು ನಿರ್ವಿವಾದವಾದ ಸತ್ಯ.. ಈ ಅಂಶವನ್ನು ಮುಂದಿಟ್ಟುಕೊಂಡೇ ನಮ್ಮ ರಾಜಕೀಯ ಪಕ್ಷಗಳು ಹೆಚ್ಚುಸಂಖ್ಯೆಯ ಸ್ಥಾನಗಳನ್ನು ಗೆದ್ದು, ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಯತ್ನಿಸುತ್ತಾ ಬಂದಿವೆ.

 ವಿಪರ್ಯಾಸವೆಂದರೆ ಜನರ ವಿಶ್ವಾಸವೇ ಬೇರೆ, ಬಹುಮತವೇ ಬೇರೆ ಎಂಬ ನೈತಿಕ ಸತ್ಯವನ್ನು ನಮ್ಮ ರಾಜಕಾರಣಿಗಳು ರಾಜಕೀಯಪಕ್ಷಗಳು ಮರೆತಂತೆ ವರ್ತಿಸುತ್ತಿವೆ ಅಥವಾ ನಟಿಸುತ್ತಿವೆ. ಜನರ ವಿಶ್ವಾಸ ದೊರೆಯದೆ ಹೋದರೂ ಸರಿ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಅಂಕಿಅಂಶಗಳ ಕಸರತ್ತಿನ ಮೂಲಕ ಬಹುಮತ ಸಾಬೀತು ಪಡಿಸಿ ಅಧಿಕಾರಪಡೆಯುವ ಹುನ್ನಾರಗಳನ್ನು ಮಾಡುತ್ತಲೇ ಬಂದಿವೆ. ಈದಿಸೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ಧಿಕ್ಕರಿಸಿ, ಕಾನೂನಿನ ತಾಂತ್ರಿಕ ಲೋಪದೋಷಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುತ್ತ ರಾಜಕಾರಣ ಮಾಡುತ್ತಿರುವುದು ಮಾಮೂಲಿಯಾಗಿ ಬರುತ್ತಿದೆ.

ಎಂಬತ್ತರ ದಶಕದಲ್ಲಿ ಬಿಜೆಪಿ ತನ್ನ ರಾಜಕಾರಣ ಶುರು ಮಾಡಿದ್ದೇ ಪಾರ್ಟಿ ವಿತ್ ಡಿಫರೆನ್ಸ್(ವಿಭಿನ್ನ ರಾಜಕೀಯ ಪಕ್ಷ)ಎನ್ನುವ ಘೋಷಣೆಯ ಮೂಲಕ. ಆದರಿವತ್ತು ಬಿಜೆಪಿ ಕೆಲವು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ನಡೆಸುತ್ತಿರುವ ತಂತ್ರಗಳನ್ನು ನೋಡಿದರೆ ಅದು ಕಾಂಗ್ರೆಸ್ ಪಕ್ಷಕ್ಕಿಂತ ವಿಭಿನ್ನವಾಗುವುದಿರಲಿ, ಅದಕ್ಕಿಂತ ಹೆಚ್ಚು ಅನೈತಿಕ ರಾಜಕಾರಣ ಮಾಡುತ್ತಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸಾರ್ವಜನಿಕವಾಗಿ ಅಣಕಿಸುವಂತೆ ರಾಜಕಾರಣ ಮಾಡುತ್ತ ಅವಕಾಶವಾದಿಗಳಿಗೆ, ಅಧಿಕಾರದ ದಾಹ ಉಳ್ಳವರಿಗೆ ಬೆಂಬಲವಾಗಿ ನಿಂತು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ.

2008 ರವರೆಗೂ ಪಕ್ಷಾಂತರ ಕಾಯ್ದೆಯು ನಿಜಕ್ಕೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿತ್ತು. ಆ ಕಾಯ್ದೆಯ ಇರುವಿಕೆಯ ಭಯದಿಂದ ನಮ್ಮ ಶಾಸಕರು, ಸಂಸದರು ತಾವು ಗೆದ್ದುಬಂದ ಪಕ್ಷಗಳಿಗೆ, ಅವುಗಳ ಚಿಹ್ನೆಗಳಿಗೆ ನಿಷ್ಠರಾಗಿ ಇರುತ್ತಿದ್ದರು. ಇದರ ನಡುವೆಯೂ ಅಲ್ಲೊಂದು ಇಲ್ಲೊಂದು ಪಕ್ಷಾಂತರ ನಡೆದಿದ್ದರೂ ತೀರಾ ರಾಜಕೀಯ ವ್ಯಾಪಾರದ ಕಳಂಕ ಹೊತ್ತಿರಲಿಲ್ಲ. ಆದರೆ 2008ರಲ್ಲಿ ಯಾವಾಗ ಕರ್ನಾಟಕದಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತೋ ಅಲ್ಲಿಂದಲೇ ಪಕ್ಷಾಂತರ ನಿಷೇಧ ಕಾಯ್ದೆಯ ಕುತ್ತಿಗೆ ಹಿಚುಕುವ ತಂತ್ರಗಾರಿಕೆ ಆರಂಭವಾಯಿತು.

ಸರಳ ಬಹುಮತ ಪಡೆಯಲು ಪಕ್ಷೇತರರನ್ನು ಬಳಸಿಕೊಂಡು ಅಧಿಕಾರಕ್ಕೆ ಏರಿದ ಬಿಜೆಪಿ ಸದನದಲ್ಲಿ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳಲು ಸುಭದ್ರ ಸರಕಾರದ ನೆಪ ಹೇಳಿ ‘ಆಪರೇಷನ್ ಕಮಲ’ ಎಂಬ ಪ್ರಜಾಪ್ರಭುತ್ವ ವಿರೋಧಿ ಕ್ರಮಕ್ಕೆ ಮುಂದಾಯಿತು. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಯುವಂತೆ ನೋಡಿಕೊಂಡಿತು. ತನ್ಮೂಲಕ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು 122ಕ್ಕೆ ಏರಿಸಿಕೊಂಡು ತಾನಿನ್ನು ಸುಭದ್ರ ಎನ್ನುವಂತೆ ಬೀಗಿತು. ಅಲ್ಲಿಂದಲೇ ಈ ಪಕ್ಷಾಂತರ ಕಾಯ್ದೆಯನ್ನು ಬದಿಗಿರಿಸಿ ಬೇರೆ ತೆರನಾದ ರಾಜಕಾರಣ ಮಾಡಿ ಅಧಿಕಾರ ಉಳಿಸಿಕೊಳ್ಳುವ ಮತ್ತು ಪಡೆಯುವ ಹೊಸ ಆಟವನ್ನು ಬಿಜೆಪಿ ಶುರುಮಾಡಿತು ಎನ್ನಬಹುದು.

2018ರ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ 104 ಸ್ಥಾನಗಳನ್ನು ಪಡೆದೂ ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ನಂತರ ಅಧಿಕಾರ ಹಿಡಿದ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿಸರಕಾರವನ್ನು ಅಭದ್ರಗೊಳಿಸುವ ಪ್ರಯತ್ನದಲ್ಲಿ ತನ್ನ ವಿರೋಧಪಕ್ಷದ ಕರ್ತವ್ಯವನ್ನು ಮರೆತ ಬಿಜೆಪಿ ಕಾಂಗ್ರೆಸ್ ಮತ್ತು ಜನತಾದಳದ ಹಲವು ಶಾಸಕರನ್ನು ರಾಜೀನಾಮೆ ಕೊಡಿಸಿತು. ರಾಜೀನಾಮೆ ಅಂಗೀಕಾರ, ಅನರ್ಹತೆಯ ಗೋಜಲುಗಳಲ್ಲಿ ಮೈತ್ರಿ ಸರಕಾರ ವಿಶ್ವಾಸ ಮತ ಕಳೆದುಕೊಂಡು ಬಿದ್ದು ಹೋಯಿತು. ನಂತರ ನಡೆದ ಉಪಚುನಾವಣೆಗಳಲ್ಲಿ ಗೆದ್ದುಬಂದ ಪಕ್ಷಾಂತರಿ ಶಾಸಕರು ಸಚಿವರಾದರು. ಮಾತೆತ್ತಿದರೆ ಜನತಾ ನ್ಯಾಯಾಲಯದ ಮಾತಾಡುವ ಬಿಜೆಪಿ ಸಂವಿಧಾನದ ಆಶಯಗಳನ್ನು ತೂರಿ ಅಂಕಿಸಂಖ್ಯೆಗಳ ಲೆಕ್ಕಾಚಾರವೇ ತನಗೆ ಮುಖ್ಯವೆಂದು ತೋರಿಸಿಕೊಟ್ಟಿದೆ.

ಇದೀಗ ಬಿಜೆಪಿ ಮಧ್ಯಪ್ರದೇಶದಲ್ಲಿಯೂ ತನ್ನ ಆಪರೇಷನ್ ಕಮಲದ ಕೈಚಳಕದಿಂದ ಸುಮಾರು ಇಪ್ಪತ್ತೆರಡು ಶಾಸಕರ ರಾಜೀನಾಮೆ ಕೊಡಿಸಿ, ತನ್ನದೇ ಪಕ್ಷದ ಅಧಿಕಾರವಿರುವ ಕರ್ನಾಟಕದ ಬೆಂಗಳೂರಿನ ರೆಸಾರ್ಟ್‌ ಒಂದರಲ್ಲಿ ಇರಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ದೂರುಗಳನ್ನು ಆಲಿಸಿದ ಸುಪ್ರೀಂಕೋರ್ಟ್ ವಿಸ್ವಾಸ ಮತ ಯಾಚಿಸಲು ಕಮಲನಾಥ್ ಅವರಿಗೆ ಸೂಚಿಸಿತ್ತು. ಆದರೆ ತನಗೆ ಸದನದಲ್ಲಿ ಬಹುಮತ ಇಲ್ಲವೆಂಬುದನ್ನು ಮನಗಂಡ ಕಮಲನಾಥ್ ರಾಜೀನಾಮೆ ನೀಡಿ ನಿರ್ಗಮಿಸಿ ಬಿಜೆಪಿ ಸರಕಾರ ರಚಿಸಲು ಅನುವು ಮಾಡಿಕೊಟ್ಟರು. ಅಲ್ಲಿಗೆ ತನ್ನ ಆಪರೇಷನ್ ಕಮಲದ ಕಾರ್ಯತಂತ್ರದಿಂದ ದೇಶದೊಳಗಿನ ವಿರೋಧಪಕ್ಷಗಳ ಎರಡು ರಾಜ್ಯಸರಕಾರಗಳನ್ನು ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾಗುವುದರೊಂದಿಗೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಣ್ಣುಪಾಲು ಮಾಡಲಾಯಿತು.

ಬಹುಶ: ಅಧಿಕಾರದ ಹಪಾಹಪಿಯಲ್ಲಿರುವ ಬಿಜೆಪಿ ಇಷ್ಟಕ್ಕೇನೇ ನಿಲ್ಲುವಂತೆ ಕಾಣಿಸುತ್ತಿಲ್ಲ. ಈಗಾಗಲೇ ರಾಜಾಸ್ಥಾನದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್‌ನ ಹಲವು ಶಾಸಕರನ್ನು ಸಂಪರ್ಕಿಸುತ್ತ ಅಲ್ಲಿಯೂ ಆಪರೇಷನ್ ಕಮಲ ನಡೆಸಲು ಸನ್ನದ್ಧವಾಗುತ್ತಿದೆ.

ಸಂಖ್ಯಾಬಲವಿರದೆ ಹೋದರೂ ಬೇರೆ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ಮತ್ತೆ ಅವರನ್ನು ತನ್ನ ಪಕ್ಷದ ಚಿಹ್ನೆಯಡಿಯಲ್ಲಿ ಗೆಲ್ಲಿಸಿಕೊಂಡು ಬಂದು ತನಗೆ ಸದನದಲ್ಲಿ ಬಹುಮತ ಇದೆಯೆಂದು ಸಾಬೀತು ಪಡಿಸಿ ಸರಕಾರ ರಚಿಸುವುದು ಕಾನೂನಿನ ವ್ಯಾಪ್ತಿಯೊಳಗೆ ಇದೆಯೆಂದು ಬಿಜೆಪಿ ಪದೇಪದೇ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದೆ. ಅದರೆ ತಾನು ಇತರ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾದ ರಾಜಕಾರಣದ ಸಿದ್ಧಾಂತವನ್ನು ಹೊಂದಿದ್ದೇನೆಂದು ಮಾತಾಡುವ ಬಿಜೆಪಿ ಈ ನೆಲದ ಮತದಾರರ ನೈತಿಕ ಪ್ರಶ್ನೆಗಳಿಗೆ ಉತ್ತರ ಕೊಡುವ ಗೋಜಿಗೆ ಹೋಗುವುದಿಲ್ಲ.

 ಹಾಗಾದರೆ ಯಾಕೆ ಬಿಜೆಪಿ ಇಂತಹ ಹಿಂಬಾಗಿಲಿನ ರಾಜಕೀಯ ಮಾಡಲು ಹೊರಟಿದೆ ಎಂಬ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಲು ಕಷ್ಟ ಪಡಬೇಕಿಲ್ಲ. 2014ರ ನಂತರ ಸತತವಾಗಿ ಒಂದಾದ ಮೇಲೊಂದು ರಾಜ್ಯದ ಚುನಾವಣೆಗಳನ್ನು ಗೆಲ್ಲುತ್ತಾ ಬಂದ ಬಿಜೆಪಿಯ ಆತ್ಮವಿಶ್ವಾಸ ಈಗ ಸಾಕಷ್ಟು ಕುಗ್ಗಿದೆ. ಅದಕ್ಕೆ ಮುಖ್ಯಕಾರಣ ಕೇಂದ್ರ ಸರಕಾರದ ಆಡಳಿತದಿಂದ ಜನ ಭ್ರಮನಿರಸನಗೊಂಡಿರುವುದಾಗಿದೆ. 2018ರ ನಂತರ ನಡೆದ ಆರು ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಸೋತು ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಆದರೆ ಈ ಚುನಾವಣೆಗಳ ಸೋಲಿನಿಂದ ಪಾಠ ಕಲಿಯಬೇಕಿದ್ದ ಬಿಜೆಪಿ ಅದನ್ನು ಬಿಟ್ಟು ಹೇಗಾದರೂ ಮಾಡಿ ಸೋತ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಕಾರ್ಯಕ್ಕೆ ಮುಂದಾಗಿದೆ. ಇಂತಹ ಸನ್ನಿವೇಶದಲ್ಲಿ ತಮ್ಮ ಪಕ್ಷದ ಚಿಹ್ನೆಯಿಂದ ಗೆದ್ದ ಜನಪ್ರತಿನಿಧಿಗಳನ್ನು ತಮ್ಮ ಪಕ್ಷದೊಳಗೆ ಉಳಿಸಿಕೊಳ್ಳುವುದೇ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಂತೂ ಹೌದು.

ಇವತ್ತೇನೋ ಬಿಜೆಪಿ ತನ್ನೀ ನಡೆಯನ್ನು ಕಾನೂನಿನ ಚೌಕಟ್ಟಿನೊಳಗೆ ಇದೆಯೆಂದು ಸಮರ್ಥಿಸಿಕೊಳ್ಳಬಹುದು. ಆದರೆ ಮುಂದೊಂದು ದಿನ ಇದೇ ತಂತ್ರ ಅವರಿಗೆ ಮುಳುವಾಗಲೂಬಹುದು. ಇದು ಕಾನೂನು ಮತ್ತು ರಾಜಕೀಯ ನೈತಿಕತೆಯ ನಡುವಿನ ಸಂಘರ್ಷವಾಗಿದ್ದು, ಕೊನೆಗೆ ನೈತಿಕತೆಯನ್ನೇ ಗೆಲ್ಲಿಸುವ ಹೊಣೆಗಾರಿಕೆ ಈ ದೇಶದ ಮತದಾರನದ್ದಾಗಿದೆ.

Similar News