'ಪಿಎಂ ಕೇರ್ಸ್' ನಿಧಿಗೆ ದೇಣಿಗೆ ನೀಡುವವರಿಗೆ ಸಿಗುವ ತೆರಿಗೆ ವಿನಾಯಿತಿಗಳಿವು...

Update: 2020-04-01 14:06 GMT

ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಸ್ಥಾಪಿಸಿರುವ ಪಿಎಂ ಕೇರ್ಸ್ ನಿಧಿಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅನ್ವಯ ಶೇಕಡ 100ರಷ್ಟು ವಿನಾಯ್ತಿ ನೀಡುವ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಉದ್ದೇಶಿಸಲಾಗಿದೆ.

ಈ ನಿಧಿಗೆ ಎಷ್ಟು ಸಣ್ಣ ಮೊತ್ತವನ್ನಾದರೂ ಸಾರ್ವಜನಿಕರು ದೇಣಿಗೆಯಾಗಿ ನೀಡಬಹುದು ಎಂದು ಮೋದಿ ಕಳೆದ ವಾರ ನಿಧಿ ಕರೆ ನೀಡಿದ್ದರು. ಮೋದಿ ಅಧ್ಯಕ್ಷತೆಯ ಈ ಟ್ರಸ್ಟ್‍ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಾರೆ.

ಇದಕ್ಕೆ ನೀಡುವ ದೇಣಿಗೆಗೆ ಲಭ್ಯವಿರುವ ವಿನಾಯಿತಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲ ಅಂಶಗಳು ಇಲ್ಲಿವೆ:

1. ಈ ವಿನಾಯಿತಿಗಾಗಿಯೇ ಸರ್ಕಾರ ವಿಶೇಷ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಒಟ್ಟು ಆದಾಯದ ಶೇಕಡ 10ನ್ನು ಮಾತ್ರ ದೇಣಿಗೆಯಾಗಿ ನೀಡಬೇಕು ಎಂಬ ನಿಯಮವೂ ಇದಕ್ಕೆಅನ್ವಯವಾಗುವುದಿಲ್ಲ.

2. 2020ರ ಜೂನ್ 30ರವರೆಗೆ ನಿಧಿಗೆ ನೀಡುವ ಮೊತ್ತವನ್ನು ನೀವು 2019-20ನೇ ಹಣಕಾಸು ವರ್ಷದ ಆದಾಯದಿಂದ ಕಡಿತಗೊಳಿಸಬಹುದು.

3. ಸುಗ್ರೀವಾಜ್ಞೆಯ ಪ್ರಕಾರ, 2020ರ ಜೂನ್ 30ರವರೆಗೆ ನೀಡುವ ಮೊತ್ತವನ್ನು 2019-20ರ ಆದಾಯದಿಂದ ಕಡಿತಗೊಳಿಸುವ ಜತೆಗೆ, 20-21ರ ತೆರಿಗೆ ವಿನಾಯ್ತಿ ವ್ಯವಸ್ಥೆಗೂ ಇದು ಅರ್ಹವಾಗುತ್ತದೆ.

4. ಡೆಬಿಟ್‍ ಕಾರ್ಡ್ ಮತ್ತು ಕ್ರೆಡಿಟ್‍ಕಾರ್ಡ್, ಇಂಟರ್‍ನೆಟ್ ಬ್ಯಾಂಕಿಂಗ್, ಯುಪಿಐ, ಆರ್‍ಟಿಜಿಎಸ್/ಎನ್‍ಇಎಫ್‍ಟಿ ಮೂಲಕ ಪಾವತಿಸಬಹುದು.

5. ವಿದೇಶಿ ದೇಣಿಗೆ ಸ್ವೀಕರಿಸುವ ಬಗೆಗೆ ಇನ್ನೂ ನಿರ್ಧಾರವಾಗಿಲ್ಲ. ಮುಂದಿನ 2-3 ದಿನದಲ್ಲಿ ಇದನ್ನು ಘೋಷಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News