ಕೊರೋನ ವೈರಸ್: ಆರೋಗ್ಯ ಸಿಬ್ಬಂದಿಗಳಿಗೆ ಭದ್ರತೆ ಕೋರಿ ಸುಪ್ರೀಂಗೆ ಅರ್ಜಿ

Update: 2020-04-06 18:16 GMT

ತಿರುವನಂತಪುರ, ಎ.6: ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭ ತೀವ್ರ ಅಪಾಯವನ್ನು ಎದುರಿಸುತ್ತಿರುವ ಆರೋಗ್ಯಸೇವೆಯ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಷ್ಟಾಚಾರ ನಿಯಮಾವಳಿಯನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕೇರಳದ ನರ್ಸ್‌ಗಳ ಸಂಘ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಕೊರೋನ ವೈರಸ್ ನಿರಂತರವಾಗಿ ಹರಡುತ್ತಿದ್ದು ಈ ಸಾಂಕ್ರಾಮಿಕ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನರ್ಸ್‌ಗಳಿಗೆ ಸರಿಯಾದ ವ್ಯವಸ್ಥೆಗಳಿಲ್ಲ ಎಂದು ರ್ಜಿಯಲ್ಲಿ ತಿಳಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಪ್ಯಾಕೇಜ್‌ನಡಿ ಒದಗಿಸಲಾಗಿರುವ ವೈಯಕ್ತಿಕ ಅಪಘಾತ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ ಕೊರೋನ ಸೋಂಕಿನ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ (ತಾತ್ಕಾಲಿಕ ಆಧಾರದಲ್ಲಿ ನೇಮಕವಾದವರ ಸಹಿತ) ಲಭ್ಯವಾಗಿಸಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ಸಂಘದಲ್ಲಿ ಸುಮಾರು 3.8 ಲಕ್ಷ ನರ್ಸ್‌ಗಳಿದ್ದಾರೆ. ಆರೋಗ್ಯಸೇವಾ ಕ್ಷೇತ್ರದ ಸಿಬ್ಬಂದಿಗಳು ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಾರಣ ಅವರಿಗೆ ಸೋಂಕು ಹರಡುವ ಅಪಾಯ ಹೆಚ್ಚಿದೆ. ಅಲ್ಲದೆ ಹಲವು ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಉತ್ತಮ ಗುಣಮಟ್ಟದ ವೈಯಕ್ತಿಕ ಸುರಕ್ಷಾ ಸಾಧನದ ಕೊರತೆಯಿದೆ. ಕೊರೋನ ಸೋಂಕು ಪರೀಕ್ಷಿಸುವ ಕಿಟ್‌ಗಳ ಕೊರತೆಯಿದೆ. ಅಲ್ಲದೆ ಕ್ವಾರಂಟೈನ್ ವಾರ್ಡ್‌ಗಳಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ. ಅಲ್ಲದೆ ಕೆಲವು ಆಸ್ಪತ್ರೆಗಳಲ್ಲಿ ಸಾರಿಗೆ ಸೌಲಭ್ಯ ನೀಡದೆ ಹೆಚ್ಚುವರಿ (ಓವರ್‌ಟೈಮ್) ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ರಜೆ ಪಡೆದರೆ ವೇತನದಲ್ಲಿ ಕಡಿತ ಮಾಡಲಾಗುತ್ತಿದೆ.

ಗರ್ಭೀಣಿಯಾದವರು ಅಥವಾ ಸ್ತನ್ಯಪಾನ ಮಾಡಿಸುತ್ತಿರುವವರನ್ನೂ ಅಧಿಕ ಅಪಾಯವಿರುವ ಕಾರ್ಯ ನಿರ್ವಹಿಸಲು ಬಲವಂತ ಪಡಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಸೇವೆಯ ಸಿಬಂದಿಗಳಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಷ್ಟಾಚಾರ ನಿಯಮಾವಳಿಯನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ. ಈ ಮಧ್ಯೆ, ತಾವು ರಸ್ತೆಯಲ್ಲಿ ನಡೆಯುತ್ತಿರುವಾಗ ಜನರು ತಮ್ಮನ್ನು ಕೊರೊನ ವೈರಸ್ ಎಂದು ಕರೆದು ಗೇಲಿ ಮಾಡುತ್ತಿದ್ದಾರೆ ಎಂದು ಅಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್‌ಗಳು ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News