ಕೋವಿಡ್ 19 ಪರೀಕ್ಷೆಗಳಿಗೆ ಖಾಸಗಿ, ಸರಕಾರಿ ಲ್ಯಾಬ್ ಗಳು ಯಾವುದೇ ಶುಲ್ಕ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ

Update: 2020-04-08 16:40 GMT

ಹೊಸದಿಲ್ಲಿ,ಎ.8: ಕೊರೋನ ವೈರಸ್ ಸೋಂಕು ಪರೀಕ್ಷೆಗಾಗಿ ರೋಗಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸದಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ದೇಶಾದ್ಯಂತದ ಖಾಸಗಿ ಲ್ಯಾಬ್‌ ಗಳಿಗೆ ಆದೇಶಿಸಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಾನ್ಯತೆ ಪಡೆದ ಸರಕಾರಿ ಅಥವಾ ಖಾಸಗಿ ಲ್ಯಾಬ್‌ ಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳು ಉಚಿತವಾಗಿರುತ್ತವೆ.

ಕೊರೋನ ವೈರಸ್ ಪರೀಕ್ಷೆಗಳನ್ನು ಎನ್‌ಎಬಿಎಲ್ ಮಾನ್ಯತೆ ಪಡೆದ ಲ್ಯಾಬ್ ‌ಗಳು ಅಥವಾ ಡಬ್ಲ್ಯಎಚ್‌ಒ ಅಥವಾ ಐಸಿಎಂಆರ್‌ನಿಂದ ಅನುಮೋದನೆ ಪಡೆದ ಯಾವುದೇ ಸಂಸ್ಥೆಯಲ್ಲಿ ಮಾತ್ರ ನಡೆಸಬೇಕು ಎಂದೂ ನ್ಯಾಯಾಲಯವು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಲೋಕೋಪಕಾರಿ ಸೇವೆಗಳನ್ನು ಒದಗಿಸುವ ಮೂಲಕ ಕೊರೋನ ವೈರಸ್ ಪಿಡುಗನ್ನು ನಿಯಂತ್ರಿಸುವಲ್ಲಿ ಲ್ಯಾಬ್‌ಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳು ಮಹತ್ವದ ಪಾತ್ರವನ್ನು ಹೊಂದಿವೆ ಎಂದು ನ್ಯಾಯಮೂರ್ತಿಗಳಾದ ಅಶೋಕ ಭೂಷಣ ಮತ್ತು ಎಸ್.ರವೀಂದ್ರ ಭಟ್ ಅವರ ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

 ಪೀಠವು ದೇಶದಲ್ಲಿಯ ಎಲ್ಲ ರೋಗಿಗಳಿಗೆ ಶುಲ್ಕರಹಿತ ಪರೀಕ್ಷಾ ಸೌಲಭ್ಯವನ್ನೊದಗಿಸುವಂತೆ ಕೇಂದ್ರ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶವನ್ನು ಕೋರಿ ನ್ಯಾಯವಾದಿ ಶಶಾಂಕದೇವ ಸುಧಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

 ಇದಕ್ಕೂ ಮುನ್ನ, ಕೊರೋನ ವೈರಸ್ ಪರೀಕ್ಷೆಯನ್ನು ನಡೆಸುವ ಖಾಸಗಿ ಲ್ಯಾಬ್‌ಗಳು ದುಬಾರಿ ಶುಲ್ಕವನ್ನು ವಿಧಿಸದಂತೆ ವ್ಯವಸ್ಥೆಯೊಂದನ್ನು ಕೇಂದ್ರವು ರೂಪಿಸಬೇಕು ಎಂದು ಹೇಳಿದ್ದ ನ್ಯಾಯಾಲಯವು, ಕೊರೋನ ವೈರಸ್ ಪರೀಕ್ಷೆಗಾಗಿ ಖಾಸಗಿ ಲ್ಯಾಬ್‌ಗಳು ಜನರಿಂದ ಶುಲ್ಕವನ್ನು ವಸೂಲು ಮಾಡಲು ಅವಕಾಶ ನೀಡಬೇಡಿ. ಪರೀಕ್ಷೆಗಳಿಗೆ ಸರಕಾರವೇ ಶುಲ್ಕವನ್ನು ಭರಿಸುವ ವ್ಯವಸ್ಥೆಯೊಂದನ್ನು ರೂಪಿಸಬಹುದಾಗಿದೆ ಎಂದು ಹೇಳಿತ್ತು.

 ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಲಯದ ನಿರ್ದೇಶದ ಬಗ್ಗೆ ತಾನು ಸರಕಾರದಿಂದ ಸೂಚನೆಗಳನ್ನು ಪಡೆದುಕೊಳ್ಳಬೇಕಿದೆ ಎಂದು ತಿಳಿಸಿದಾಗ ಪೀಠವು, ಸದ್ಯಕ್ಕೆ ತಾನು ಈ ವಿಷಯಲ್ಲಿ ಆದೇಶವನ್ನು ಹೊರಡಿಸುವುದಾಗಿ ತಿಳಿಸಿತ್ತು.

ಹಾಲಿ ಖಾಸಗಿ ಲ್ಯಾಬ್‌ಗಳಲ್ಲಿ ಕೊರೋನ ವೈರಸ್ ಪರೀಕ್ಷಾ ಶುಲ್ಕಕ್ಕೆ 4,500 ರೂ.ಗಳ ಮಿತಿಯನ್ನು ಹೇರಿದ್ದ ಐಸಿಎಂಆರ್‌ನ ಮಾರ್ಚ್ 17ರ ನಿರ್ದೇಶವನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸಲು ಸರಕಾರವು ತನ್ನಿಂದ ಸಾಧ್ಯವಿರುವಷ್ಟು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ. 118 ಲ್ಯಾಬ್‌ಗಳು ಪ್ರತಿದಿನ 15,000 ಪರೀಕ್ಷೆಗಳನ್ನು ನಡೆಸುತಿದ್ದವು. ಇದು ಸಾಕಾಗುತ್ತಿರಲಿಲ್ಲ, ಹೀಗಾಗಿ 47 ಖಾಸಗಿ ಲ್ಯಾಬ್ ಸರಣಿಗಳಿಗೂ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಮೆಹ್ತಾ ತಿಳಿಸಿದರು.

ಮೂರು ವಾರಗಳ ಲಾಕ್‌ ಡೌನ್‌ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಜನರ ಬವಣೆಗೆ ಅಧಿಕಾರಿಗಳು ಸ್ಪಂದಿಸುತ್ತ್ತಿಲ್ಲ ಎಂದು ಸುಧಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News