ಮಹಾರಾಷ್ಟ್ರದಿಂದ ವಾಪಸಾಗಿರುವ 173 ಸಿಖ್ ಯಾತ್ರಾರ್ಥಿಗಳಿಗೆ ಕೋವಿಡ್-19 ಸೋಂಕು
ಚಂಡಿಗಢ, ಮೇ1: ಮಹಾರಾಷ್ಟ್ರದಿಂದ ವಾಪಸಾಗಿರುವ ಸಾವಿರಾರು ಸಿಖ್ ಯಾತ್ರಾರ್ಥಿಗಳ ಪೈಕಿ 173ಕ್ಕೂ ಅಧಿಕ ಜನರಿಗೆ ಕೊರೋನವೈರಸ್ ಸೋಂಕು ತಗಲಿದ್ದು, ಇದೊಂದು ಪಂಜಾಬ್ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರಕಾರ ಏಕಾಏಕಿ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದಾಗ ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಗುರುದ್ವಾರ ಹಝೂರ್ ಸಾಹಿಬ್ನಲ್ಲಿ ಸಿಖ್ ಯಾತ್ರಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದರು. ಎಪ್ರಿಲ್ 22ರಿಂದ ಯಾತ್ರಾರ್ಥಿಗಳು ಪಂಜಾಬ್ಗೆ ವಾಪಸಾಗಲು ಆರಂಭಿಸಿದ್ದರು. ಆದರೆ ಅವರು ವಾಪಸಾದ 5 ದಿನಗಳ ಬಳಿಕ ಕ್ವಾರಂಟೈನ್ಗೆ ಇಡಲಾಗಿತ್ತು. ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ವಿರುದ್ಧ ವಿಪಕ್ಷ ಅಕಾಲಿ ದಳ ನಿರ್ಲಕ್ಷದ ಆರೋಪ ಹೊರಿಸಿದ್ದು, ಯಾತ್ರಾರ್ಥಿಗಳಿಗೆ ಸರಿಯಾಗಿ ಕ್ವಾರಂಟೈನ್ ನಡೆಸಲಾಗಿಲ್ಲ. ಮಹಾರಾಷ್ಟ್ರ ರಾಜ್ಯ ಕೂಡ ಯಾತ್ರಾರ್ಥಿಗಳಿಗೆ ನೆರವಾಗಿರಲಿಲ್ಲ. ಯಾತ್ರಾರ್ಥಿಗಳನ್ನು ಪರೀಕ್ಷಿಸದೇ ಅವರಷ್ಟಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಿದೆ.
ಮಹಾರಾಷ್ಟ್ರದ ನಾಂದೇಡ್ ಗುರುದ್ವಾರಕ್ಕೆ ಸುಮಾರು 4,000 ಯಾತ್ರಾರ್ಥಿಗಳು ತೆರಳಿದ್ದರು. ಮಾ.25ರಂದು ಘೋಷಿಸಿರುವ ಲಾಕ್ಡೌನ್ನಿಂದಾಗಿ ಇವರೆಲ್ಲರೂ ಸಿಲುಕಿಹಾಕಿಕೊಂಡಿದ್ದರು. ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ ಬಳಿಕ 3,500ಕ್ಕೂ ಅಧಿಕ ಯಾತ್ರಾರ್ಥಿಗಳು ಪಂಜಾಬ್ಗೆ ವಾಪಸಾಗಿದ್ದರು.