ವಲಸೆ ಕಾರ್ಮಿಕರಿಗೆ ವಿಶ್ರಾಂತಿ ಸ್ಥಳ,ಆಹಾರ ಒದಗಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

Update: 2020-05-19 16:35 GMT

 ಹೊಸದಿಲ್ಲಿ,ಮೇ 19: ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಹೆಚ್ಚು ರೈಲುಗಳು ಮತ್ತು ಬಸ್‌ಗಳನ್ನು ಓಡಿಸಲು ರಾಜ್ಯಗಳು ಮತ್ತು ರೈಲ್ವೆ ಸಚಿವಾಲಯ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಸೂಚಿಸಿದೆ. ಇದೇ ವೇಳೆ,ರಾಜ್ಯಗಳು ಕಾಲ್ನಡಿಗೆಯಿಂದ ತಮ್ಮ ಗ್ರಾಮಗಳಿಗೆ ಮರಳುತ್ತಿರುವ ವಲಸಿಗರಿಗಾಗಿ ವಿಶ್ರಾಂತಿ ಸ್ಥಳಗಳು,ಆಹಾರ ಮತ್ತು ಆಶ್ರಯಗಳ ವ್ಯವಸ್ಥೆಗಳನ್ನು ಮಾಡಬೇಕು ಎಂದೂ ಸಚಿವಾಲಯವು ತಿಳಿಸಿದೆ.

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ವಲಸೆ ಕಾರ್ಮಿಕರ ಪ್ರಯಾಣವನ್ನು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಸೂಚಿಸಿರುವ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು,ರೈಲ್ವೆ ಸಚಿವಾಲಯ ಮತ್ತು ರಾಜ್ಯಗಳು ಪರಸ್ಪರ ಸಮನ್ವಯದೊಂದಿಗೆ ಹೆಚ್ಚಿನ ವಿಶೇಷ ರೈಲುಗಳನ್ನು ಓಡಿಸಬಹುದಾಗಿದೆ. ಜಿಲ್ಲಾಡಳಿತಗಳ ಅಧಿಕಾರಿಗಳು ಕಾಲ್ನಡಿಗೆಯಿಂದ ಸಾಗುತ್ತಿರುವ ವಲಸೆ ಕಾರ್ಮಿಕರಿಗೆ ನಿಯೋಜಿತ ವಿಶ್ರಾಂತಿ ಸ್ಥಳಗಳನ್ನು ಒದಗಿಸಬೇಕು ಮತ್ತು ಅವರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಮೀಪದ ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳ ಬಗ್ಗೆ ಮಾಹಿತಿಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.

 ಶಂಕಿತ ಕೋವಿಡ್-19 ಪ್ರಕರಣಗಳಲ್ಲಿ ಸಂಪರ್ಕ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಲು ನೆರವಾಗುವಂತೆ ಹೆಸರು,ವಿಳಾಸ ಮತ್ತು ಫೋನ್ ನಂಬರ್‌ಗಳೊಂದಿಗೆ ವಲಸಿಗರ ಪಟ್ಟಿಯನ್ನು ರಾಜ್ಯಗಳು ಸಿದ್ಧಪಡಿಸಬಹುದಾಗಿದೆ. ರೈಲು ಅಥವಾ ಬಸ್‌ಗಳ ಮೂಲಕ ಊರು ತಲುಪಿದ ಬಳಿಕ ತಮಗೆ ದೀರ್ಘಕಾಲ ಕ್ವಾರಂಟೈನ್ ವಿಧಿಸಲಾಗುತ್ತದೆ ಎಂಬ ವಲಸೆ ಕಾರ್ಮಿಕರಲ್ಲಿಯ ಭೀತಿಯನ್ನು ರಾಜ್ಯಗಳ ಅಧಿಕಾರಿಗಳು ಮತ್ತು ಸರಕಾರೇತರ ಸಂಸ್ಥೆಗಳು ನಿವಾರಿಸಬೇಕು ಎಂದಿರುವ ಭಲ್ಲಾ,ವಲಸೆ ಕಾರ್ಮಿಕರನ್ನು ಸಾಗಿಸುವ ಬಸ್‌ಗಳಿಗೆ ಅಂತರರಾಜ್ಯ ಗಡಿಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ.

ವಲಸಿಗರಲ್ಲಿಯ ಆತಂಕವನ್ನು ನಿವಾರಿಸಲು ಸರಕಾರಗಳು ರೈಲುಗಳು ಮತ್ತು ಬಸ್‌ಗಳ ನಿರ್ಗಮನ ಕುರಿತು ಅವರಿಗೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಬೇಕು. ಅವರ ಪೈಕಿ ಮಹಿಳೆಯರು,ಮಕ್ಕಳು ಮತ್ತು ವಯಸ್ಸಾದವರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ವಿಶೇಷ ಗಮನವನ್ನು ವಹಿಸಬೇಕು ಎಂದೂ ಭಲ್ಲಾ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News