ಇಡೀ ದಿನ ರಮಝಾನ್ ಉಪವಾಸವಿದ್ದು ಒಂದು ಹನಿ ನೀರು ಕುಡಿಯದೆ ದೇಶಕ್ಕಾಗಿ ಹುತಾತ್ಮರಾದ ಯೋಧರು

Update: 2020-05-21 12:08 GMT

ರಮಝಾನ್ ಉಪವಾಸ ತೊರೆಯುವುದಕ್ಕಾಗಿ ಬ್ರೆಡ್ ಖರೀದಿಸಲು ಬೇಕರಿಯೊಂದಕ್ಕೆ ತೆರಳಿದ್ದಾಗ ಬೈಕ್ ನಲ್ಲಿ ಬಂದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ ಎಫ್ ಯೋಧರಾದ ಝಿಯಾವುಲ್ ಹಕ್ ಮತ್ತು ರಾಣಾ ಮೊಂಡಲ್ ಹುತಾತ್ಮರಾಗಿದ್ದಾರೆ.

ಬುಧವಾರ ಸಂಜೆ ಈ ದಾಳಿ ನಡೆದಿತ್ತು. ಶ್ರೀನಗರದ ಹೊರವಲಯದಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾದ ಮತ್ತೊಂದು ಸಂಘಟನೆಯಾದ ದ ರೆಸಿಸ್ಟಂಟ್ ಫ್ರಂಟ್ ಹೊತ್ತುಕೊಂಡಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನವರಾದ ಹಕ್ (34) ಮತ್ತು ಮೊಂಡಾಲ್ (29) ಇಬ್ಬರ ತಲೆಗೂ ಗಂಭೀರ ಗಾಯಗಳಾಗಿತ್ತು. ಚಂಡಮಾರುತ ಅಂಫಾನ್ ಪರಿಣಾಮ ಇಬ್ಬರು ಯೋಧರ ಮೃತದೇಹಗಳನ್ನು ಮನೆಗಳಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್ ಎಫ್ ನ 37ನೆ ಬೆಟಾಲಿಯನ್ ನ ಈ ಇಬ್ಬರು ಸ್ನೇಹಿತರು ಪಂದಚ್ ಕ್ಯಾಂಪ್ ಗೆ ನಿಯೋಜಿಸಲಾಗಿತ್ತು. ಇಫ್ತಾರ್ ಗೆ ಕೆಲವು ನಿಮಿಷಗಳಿರುವಾಗಲೇ ಈ ಇಬ್ಬರು ಹುತಾತ್ಮರಾದರು ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಇಡೀ ದಿನ ಉಪವಾಸವಿದ್ದು ಒಂದು ಹನಿ ನೀರು ಕುಡಿಯದೆ ಅವರು ದೇಶಕ್ಕಾಗಿ ಕೊನೆಯುಸಿರೆಳೆದರು ಎಂದು ಬಿಎಸ್ ಎಫ್ ನ ಸಹೋದ್ಯೋಗಿಗಳು ದುಃಖ ವ್ಯಕ್ತಪಡಿಸುತ್ತಾರೆ.

2009ರಲ್ಲಿ ಬಿಎಸ್ ಎಫ್ ಸೇರಿದ ಹಕ್ ಅವರಿಗೆ ತಂದೆ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅದರಲ್ಲಿ ಒಬ್ಬ ಪುತ್ರಿಗೆ 4 ವರ್ಷವಾಗಿದ್ದರೆ, ಮತ್ತೊಬ್ಬ ಪುತ್ರಿಗೆ 6 ತಿಂಗಳು. ರಾಣಾ ಮೊಂಡಾಲ್ ಕೂಡ ಹೆತ್ತವರು, ಪತ್ನಿ ಮತ್ತು 6 ತಿಂಗಳ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News