ಶ್ರೀನಗರ: ಭದ್ರತಾ ಪಡೆಗಳ ಕಾರ್ಯಾಚರಣೆಯ ಸಂದರ್ಭ ಮನೆಕುಸಿದು ಬಿದ್ದು 12 ವರ್ಷದ ಬಾಲಕ ಮೃತ್ಯು
ಶ್ರೀನಗರ, ಮೇ 21: ಮಂಗಳವಾರ ಶ್ರೀನಗರದ ನವಾಕದಲ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ಸಂದರ್ಭ ಸಮೀಪದಲ್ಲಿದ್ದ ಮನೆಯೊಂದು ಕುಸಿದುಬಿದ್ದು ಗಂಭೀರ ಗಾಯಗೊಂಡಿದ್ದ 12 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಬುಧವಾರ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ ಎಂದು ವರದಿಯಾಗಿದೆ.
ಮೃತ ಬಾಲಕನನ್ನು ಬಾಸಿಮ್ ಇಜಾಝ್ ಎಂದು ಗುರುತಿಸಲಾಗಿದೆ. ಎನ್ಕೌಂಟರ್ ಸಂದರ್ಭ ಈ ಪ್ರದೇಶದಲ್ಲಿದ್ದ 8 ಮನೆಗಳು ಸಂಪೂರ್ಣ ಸುಟ್ಟುಹೋಗಿದ್ದರೆ ಎರಡು ಮನೆ ತೀವ್ರ ಹಾನಿಗೀಡಾಗಿ ಕುಸಿದು ಬಿದ್ದಿತ್ತು. ಒಂದು ಮನೆಯೊಳಗಿದ್ದ ಬಾಸಿಮ್ ಸಹಿತ ್ದ ಐದು ಮಂದಿ ಗಾಯಗೊಂಡಿದ್ದು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಡುಗನ ಮೈಮೇಲೆ ಸುಟ್ಟ ಗಾಯಗಳಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾನೆ. ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹೇಳಿದ್ದಾರೆ. ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.