ನೂತನ ಮಾರ್ಗಸೂತ್ರಗಳಿಗೆ ವಿರೋಧ: ವೈದ್ಯಕೀಯ ಸಿಬ್ಬಂದಿಯಿಂದ ಕೇಂದ್ರದ ವಿರುದ್ಧ ಪ್ರತಿಭಟನೆ

Update: 2020-05-23 17:38 GMT

ಹೊಸದಿಲ್ಲಿ, ಮೇ. 22: ಕೇಂದ್ರ ಹಾಗೂ ಕೆಲವು ರಾಜ್ಯ ಆರೋಗ್ಯ ಇಲಾಖೆಗಳು ಜಾರಿಗೊಳಿಸಿರುವ ನೂತನ ಕ್ವಾರಂಟೈನ್ ಮಾರ್ಗದರ್ಶಿ ಸೂತ್ರಗಳನ್ನು ವಿರೋಧಿಸಿ, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಶನಿವಾರ ಕಪ್ಪುರಿಬ್ಬನ್ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ದಿಲ್ಲಿಯ ಸನಿವಾಸ (ರೆಸಿಡೆಂಟ್) ವೈದ್ಯರ ಸಂಘಟನೆಗಳು (ಆರ್‌ಡಿಎ) ಹಾಗೂ ದಿಲೀಪ್ ಚಂದ್ ಬಂಧು ಸರಕಾರಿ ಆಸ್ಪತ್ರೆ, ಲೇಡಿ ಹಾರ್ಡಿಂಜ್, ಲೋಕನಾಯಕ್ ಆಸ್ಪತ್ರೆ ಹಾಗೂ ಆರ್‌ಎಂಎಲ್ ಸೇರಿದಂತೆ ಹಲವಾರು ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಮೇ 15ರಂದು ಜಾರಿಗೊಳಿಸಲಾದ ನೂತನ ಮಾರ್ಗಸೂಚಿಯ ಪ್ರಕಾರ, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಯು ಸೋಂಕಿಗೆ ತುತ್ತಾಗುವ ಅಪಾಯದ ಸಾಧ್ಯತೆ ಅತ್ಯಧಿಕವಾಗಿದ್ದಲ್ಲಿ ಅಥವಾ ಅವರು ಸೋಂಕಿನ ಲಕ್ಷಣಗಳನ್ನು ಪ್ರದರ್ಶಿಸಿದಲ್ಲಿ ಮಾತ್ರವೇ ಅವರಿಗೆ ಕ್ವಾರಂಟೈನ್ ವಿಧಿಸಬಹುದಾಗಿದೆ. ಆದರೆ ಹಳೆಯ ಮಾರ್ಗದರ್ಶಿ ಸೂತ್ರದಲ್ಲಿ ಎಲ್ಲಾ ಆರೋಗ್ಯ ಪಾಲನಾ ಸಿಬ್ಬಂದಿಯು 14 ದಿನಗಳ ಕಾಲ ಕೋವಿಡ್-19 ಕರ್ತವ್ಯವನ್ನು ನಿರ್ವಹಿಸಿದ ಬಳಿಕ ಅವರು 14 ದಿನಗಳ ಕ್ವಾರಂಟೈನ್‌ನಲ್ಲಿರಬೇಕೆಂದು ಸಲಹೆ ನೀಡಿತ್ತು.

ಸನಿವಾಸ ವೈದ್ಯರುಗಳ ಸಂಘಗಳ ಒಕ್ಕೂಟವು ಕೆಲವು ದಿನಗಳ ಹಿಂದೆ ಪತ್ರಬರೆದು,ನೂತನ ಮಾರ್ಗದರ್ಶಿ ಸೂತ್ರಗನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News