ಜೂ.1ರಿಂದ ಕನಿಷ್ಠ ಎರಡು ವಾರ ಲಾಕ್‌ಡೌನ್ ವಿಸ್ತರಣೆ ?

Update: 2020-05-27 18:32 GMT

ಹೊಸದಿಲ್ಲಿ, ಮೇ 27: ದೇಶಾದ್ಯಂತ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಅವ್ಯಾಹತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಜೂನ್ 1ರಿಂದ ಸತತ ಐದನೆ ಬಾರಿಗೆ ಲಾಕ್‌ಡೌನ್ ವಿಸ್ತರಿಸುವ ಸಾಧ್ಯತೆಗಳು ದಟ್ಟವಾಗಿವೆ. ಲಾಕ್‌ಡೌನ್ 5.0, ಇನ್ನೂ ಹೆಚ್ಚು ರಿಯಾಯಿತಿಗಳೊಂದಿಗೆ ಎರಡು ವಾರಗಳ ಕಾಲ ಮುಂದುವರಿಯಲಿದೆ ಎನ್ನಲಾಗಿದೆ. ನಾಲ್ಕನೆ ಹಂತದ ಲೌಕ್‌ಡೌನ್ ಮೇ 31ರಂದು ಕೊನೆಗೊಳ್ಳಲಿದೆ.

ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಮಂಗಳವಾರ 1.50 ಲಕ್ಷ ದಾಟಿದ್ದು, ಕಳೆದ 14 ದಿನಗಳ ಅವಧಿಯಲ್ಲಿ ಎರಡು ಪಟ್ಟು ಅಧಿಕಗೊಂಡಿದೆ. ಕಳೆದ 16 ದಿನಗಳಲ್ಲಿ ಕೋವಿಡ್-19ನಿಂದ ಮೃತರಾದವರ ಸಂಖ್ಯೆಯೂ ದ್ವಿಗುಣಗೊಂಡಿದ್ದು, ಮಂಗಳವಾರ ಅದು 4337ಕ್ಕೆ ತಲುಪಿತ್ತು.

ಕೇಂದ್ರ ಸರಕಾರವು ನಾಲ್ಕನೆ ಹಂತದ ಲಾಕ್‌ಡೌನ್‌ನಲ್ಲಿ ಕಂಟೈನ್‌ಮೆಂಟ್ ವಲಯಗಳಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಗಮನಹರಿಸಿತ್ತು ಹಾಗೂ ಹೆಚ್ಚಿನ ಎಲ್ಲಾ ಮಾರುಕಟ್ಟೆಗಳು, ಕೈಗಾರಿಕೆಗಳು, ಕಚೇರಿಗಳು ಹಾಗೂ ಉದ್ಯಮಗಳ ಪುನರಾರಂಭಕ್ಕೆ ಅನುಮತಿ ನೀಡಿತ್ತು. ಹಲವೆಡೆ ಬಸ್ ಸಂಚಾರ ಕೂಡಾ ಆರಂಭಗೊಂಡಿದ್ದವು. ಕಳೆದ ವಾರದಿಂದ ಸೀಮಿತ ಆಸನ ಸಾಮರ್ಥ್ಯದೊಂದಿಗೆ ದೇಶಿಯ ವಿಮಾನ ಸಂಚಾರಕ್ಕೂ ಅವಕಾಶ ನೀಡಿತ್ತು.

ಲಾಕ್‌ಡೌನ್ 5.0ನಲ್ಲಿ ಪ್ರಾರ್ಥನಾ ಮಂದಿರಗಳು ಹಾಗೂ ಜಿಮ್ನೇಶಿಯಂಗಳನ್ನು ತೆರೆದಿಡುವುದು ಸೇರಿದಂತೆ ಹಲವಾರು ವಿನಾಯ್ತಿಗಳನ್ನು ನೀಡಲಾಗುವುದು ಎನ್ನಲಾಗುತ್ತಿದೆ.

ದೇವಸ್ಥಾನ ಮತ್ತಿತರ ಆರಾಧನಾ ಸ್ಥಳಗನ್ನು ತೆರೆಯಲು ಅನುಮತಿ ನೀಡಲಾಗುವುದು ಆದರೆ ಸುರಕ್ಷಿತ ಅಂತರದ ಪಾಲನೆ ಹಾಗೂ ಸಂದರ್ಶಕರು ಮಾಸ್ಕ್‌ಗಳನ್ನು ಧರಿಸುವುದು ಮತ್ತಿತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ ಆದಾಗ್ಯೂ ಯಾವುದೇ ರೀತಿಯ ಧಾರ್ಮಿಕ ಸಮಾವೇಶ ಅಥವಾ ಉತ್ಸವಗಳ ಆಚರಣೆಗೆ ಅವಕಾಶ ನೀಡಲಾಗುವುದಿಲ್ಲವೆಂದು ತಿಳಿಸಲಾಗಿದೆ.

ಈ ಮಧ್ಯೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೂನ್ 1ರಿಂದ ಧಾರ್ಮಿಕ ಸ್ಥಳಗಳನ್ನು ತೆರೆಯುವುದಕ್ಕೆ ಈಗಾಗಲೇ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಸ್ಥಳಗಳು ಹಾಗೂ ಮಾಲ್‌ಗಳನ್ನು ತೆರೆಯಲು ಕೇಂದ್ರ ಸರಕಾರವು ಅಧಿಸೂಚನೆ ಹೊರಡಿಸಿದ ಬಳಿಕ ರಾಜ್ಯ ಸರಕಾರ ಅದಕ್ಕೆ ಅನುಮತಿ ನೀಡಲಿದೆ ಎಂದವರು ಹೇಳಿದ್ದಾರೆ.

ಆದಾಗ್ಯೂ ಮುಂದಿನ ಹಂತದ ಲಾಕ್‌ಡೌನ್‌ನಲ್ಲಿ ಮಾಲ್‌ಗಳು, ಸಿನೆಮಾ ಮಂದಿರಗಳು, ಶಾಲೆ, ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಸಭೆಗಳ ಮೇಲಿನ ನಿರ್ಬಂಧ ಮುಂದುವರಿಯುವ ಸಾಧ್ಯತೆಗಳಿವೆ.

ಕೆಲವು ರಾಜ್ಯಗಳು ಜೂನ್‌ನಲ್ಲಿ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಯೋಚಿಸುತ್ತಿವೆಯಾದರೂ, ಕೇಂದ್ರ ಸರಕಾರ ಈ ತನಕ ಆ ಬಗ್ಗೆ ಒಲವು ಹೊಂದಿಲ್ಲವೆನ್ನಲಾಗಿದೆ.

11 ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಸಾಧ್ಯತೆ

ಐದನೆ ಹಂತದ ಲಾಕ್‌ಡೌನ್, ದೇಶದ ಶೇ.70ರಷ್ಟು ಕೋವಿಡ್-19 ಪ್ರಕರಣಗಳು ವರದಿಯಾಗಿರುವ 11 ನಗರಗಳ ಮೇಲೆ ಹೆಚ್ಚು ಕೇಂದ್ರೀಕೃತ ವಾಗಿರುವುದು ಎಂದು ಉನ್ನತ ಸರಕಾರದ ಮೂಲಗಳು ತಿಳಿಸಿವೆ.

ದಿಲ್ಲಿ, ಮುಂಬೈ, ಚೆನ್ನೈ, ಕೋಲ್ಕತಾ, ಅಹ್ಮದಾಬಾದ್, ಬೆಂಗಳೂರು ಮತ್ತು ಪ್ರಮುಖ ನಗರಗಳಾದ ಪುಣೆ, ಥಾಣೆ, ಜೈಪುರ, ಸೂರತ್ ಹಾಗೂ ಇಂದೋರ್ ನಗರಗಳಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News