ಅದು ಪಿಎಂ ಅವರ ರಕ್ಷಣೆಗಾಗಿ ಇರುವ ಫಂಡ್....!

Update: 2020-06-13 19:30 GMT

ಲಾಕ್‌ಡೌನ್ ಮುಗಿಯುತ್ತಿರುವಂತೆಯೇ ಪತ್ರಕರ್ತ ಎಂಜಲು ಕಾಸಿಗೆ ‘ಚೌಕೀದಾರ’ರನ್ನು ಒಮ್ಮೆ ಭೇಟಿ ಮಾಡಿದರೆ ಹೇಗೆ? ಎಂಬ ಆಲೋಚನೆ ಬಂದದ್ದೇ ತನ್ನ ಜೋಳಿಗೆಯ ಜೊತೆಗೆ ಅಂಬಾನಿ ಮನೆಯ ಕಡೆಗೆ ಓಡಿದ. ನೋಡಿದರೆ ಆವರಣದ ಮುಖ್ಯ ದ್ವಾರದ ಬಳಿ ಚೌಕೀದಾರರು ಕುರ್ಚಿ ಹಾಕಿ ಕೂತಿದ್ದರು.

‘‘ಸಾರ್....ಇಡೀ ದೇಶದ ಆರ್ಥಿಕತೆ ನೆಲಕಚ್ಚಿದೆ. ವ್ಯಾಪಾರ ಇಲ್ಲ. ಜನರ ಬಳಿ ಹಣ ಇಲ್ಲ. ರಸ್ತೆಯಲ್ಲಿ ಜನರೇ ಇಲ್ಲ. ಬ್ಯಾಂಕ್‌ಗಳಲ್ಲಿ ದುಡ್ಡಿಲ್ಲ. ಇನ್ನೂ ಯಾವುದರ ಕಾವಲು ಕಾಯುತ್ತಿದ್ದೀರಿ...? ಮನೆಯಲ್ಲಿ ಕೂತು ಕ್ವಾರಂಟೈನ್ ಮಾಡಬಾರದ?’’ ಕಾಸಿ ಅಚ್ಚರಿಯಿಂದ ಕೇಳಿದ.

ಚೌಕೀದಾರ್ ಕಾಸಿಯನ್ನು ಮೇಲಿನಿಂದ ಕೆಳಗೊಮ್ಮೆ ನೋಡಿ ‘‘ನೀವು ಕಾಸಿಯಲವೇ?’’ ಪ್ರಶ್ನಿಸಿದರು.

‘‘ಹೌದು ಸಾರ್...’’ ಚೌಕೀದಾರರು ಗುರುತು ಹಿಡಿದುದಕ್ಕೆ ಕಾಸಿ ಸಂಭ್ರಮಗೊಂಡ.‘‘ಮುಖಕ್ಕೆ ಮಾಸ್ಕ್ ಹಾಕಿದರೂ ಹೇಗೆ ಗುರುತು ಹಿಡಿದಿರಿ ಸಾರ್?’’ ಕೇಳಿದ.
‘‘ಭಕ್ತರನ್ನು ಎಲ್ಲಿದ್ದರೂ ಗುರುತಿಸುವುದು ನನ್ನ ಹೆಗ್ಗಳಿಕೆ. ಅದಕ್ಕೆ ನಾನು ಚೌಕೀದಾರ ಆಗಿರುವುದು..ನನ್ನ ಭಕ್ತರೆಲ್ಲ ಮೂಗು ಹೊರಗೆ ಬಿಟ್ಟು ಮಾಸ್ಕ್ ಹಾಕೋರು....ನಿಮ್ಮ ಮುಖದ ಮಾಸ್ಕ್ ನೋಡಿಯೇ ಗೊತ್ತಾಯಿತು’’ ಚೌಕಿದಾರರು ಗಡ್ಡ ಸವರಿದರು.

‘‘ಸಾರ್...ಚೌಕಿದಾರಿಕೆ ಮಾಡಲು ಈಗ ಏನು ಉಳಿದಿದೆ ?’’ ಕಾಸಿ ತನ್ನ ಪ್ರಶ್ನೆಯನ್ನು ಮತ್ತೆ ಮುಂದಿಟ್ಟ.
‘‘ಉಳಿದಿದೆ...ಪಿಎಂ ಕೇರ್ಸ್ ಫಂಡ್ ಇದೆಯಲ್ಲ...? ಇದೀಗ ಅದರ ರಕ್ಷಣೆಯ ಹೊಣೆ ನನ್ನ ಮೇಲೆ ಬಿದ್ದಿದೆ....’’ ಚೌಕಿದಾರರು ಗುಟ್ಟು ಬಿಟ್ಟುಕೊಟ್ಟರು.
‘‘ಪಿಎಂ ಕೇರ್ಸ್ ಫಂಡ್‌ನ್ನು ವಿರೋಧ ಪಕ್ಷದೋರು ದೋಚುವ ಸಾಧ್ಯತೆ ಇದೆಯಾ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ನೋಡಿ....70 ವರ್ಷದಲ್ಲಿ ಕಾಂಗ್ರೆಸ್‌ಗೆ ಮಾಡಲು ಸಾಧ್ಯವಾಗದ ಎಲ್ಲವನ್ನೂ ಬರೇ ಆರು ವರ್ಷಗಳಲ್ಲಿ ಮಾಡಿದೆವು. ದೇಶವನ್ನು ಈ ಸ್ಥಿತಿಗೆ ತರಲು ಕಾಂಗ್ರೆಸ್‌ಗೆ 70 ವರ್ಷದಲ್ಲಿ ಸಾಧ್ಯವಾಗಲಿಲ್ಲ. ಆದರೆ ನಮಗೆ ಸಾಧ್ಯವಾಯಿತು. ಇದೀಗ ಪಿಎಂ ಕೇರ್ಸ್ ಫಂಡ್‌ನ ಮೇಲೆ ಕಾಂಗ್ರೆಸಿಗರ ಕಣ್ಣು ಬಿದ್ದಿದೆ. ಅದನ್ನು ರಕ್ಷಿಸುವುದು ಈ ಚೌಕೀದಾರನ ಕರ್ತವ್ಯ....’’ ಚೌಕಿದಾರರು ತಮ್ಮ ಮೇಲಿರುವ ಹೊಣೆಗಾರಿಕೆಯನ್ನು ವಿವರಿಸಿದರು.
‘‘ಸಾರ್...ಪಿಎಂ ಕೇರ್ಸ್...ಫಂಡ್ ಎನ್ನುವುದನ್ನು ಯಾಕೆ ಮಾಡಿರುವುದು ?’’ ಕಾಸಿ ಕೇಳಿದ.

‘‘ನೀವೂ ವಿರೋಧ ಪಕ್ಷಗಳ ಥರ ಮಾತಾಡ್ತೀರಲ್ಲ? ಅಷ್ಟೂ ಗೊತ್ತಾಗಲ್ವ....ಅದರ ಹೆಸರೇ ಪಿಎಂ ಕೇರ್ಸ್ ಫಂಡ್...ಅದರೆ ಪಿಎಂ ಅವರ ರಕ್ಷಣೆಗಾಗಿ ಇರುವ ಫಂಡ್...’’ ಚೌಕೀದಾರರು ವಿವರಿಸಿದರು. ‘‘ಪಿಎಂ ಅವರ ರಕ್ಷಣೆಗಾಗಿ ವಿಶೇಷ ಫಂಡ್ ಅಗತ್ಯವಿದೆಯೇ ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.

‘‘ಅಗತ್ಯವಿರದೆ ಮತ್ತೆ? ದೇಶದ ಅಭಿವೃದ್ಧಿಗಾಗಿ ಖಜಾನೆಯಲ್ಲಿರುವ ಎಲ್ಲ ಹಣವನ್ನು ವ್ಯಯ ಮಾಡಲಾಗಿದೆ. ಕೊರೋನದಿಂದ ಜನರನ್ನು ರಕ್ಷಿಸುವುದಕ್ಕಾಗಿ ಅಳಿದುಳಿದ ಹಣವನ್ನು ವೆಚ್ಚ ಮಾಡಲಾಗಿದೆ. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿರುವ ಪಿಎಂನ್ನು ರಕ್ಷಿಸುವುದಕ್ಕೆ ಹಣವೇ ಇಲ್ಲದಂತಾಗಿದೆ. ಆದುದರಿಂದ ಪಿಎಂ ಕೇರ್ಸ್‌ ಫಂಡ್‌ನ್ನು ಸ್ಥಾಪಿಸಲಾಗಿದೆ....ದೇಶದ ಮೇಲೆ ಪ್ರೀತಿಯಿರುವ ಎಲ್ಲರೂ ಈ ದೇಶದ ಪಿಎಂನ್ನು ರಕ್ಷಿಸುವುದಕ್ಕಾಗಿ ಈ ಫಂಡ್‌ಗೆ ದುಡ್ಡು ಹಾಕಿ ದೇಶಪ್ರೇಮವನ್ನು ಸಾಬೀತು ಮಾಡಬೇಕಾಗುತ್ತದೆ....ಮುಂದಿನ ದಿನಗಳಲ್ಲಿ ದೇಶದ ಎಲ್ಲ ಆಹಾರ ಪದಾರ್ಥಗಳ ಮೇಲೆ ಪಿಎಂ ಕೇರ್ಸ್ ಎನ್ನುವ ವಿಶೇಷ ತೆರಿಗೆ ಹಾಕುವ ವ್ಯವಸ್ಥೆಯನ್ನು ಮಾಡಲಾಗುತ್ತದೆ....’’ ಚೌಕೀದಾರರು ವಿವರಿಸಿದರು. ‘‘ಸಾರ್...ವಲಸೆ ಕಾರ್ಮಿಕರ ರಕ್ಷಣೆಗಾಗಿ....ಕೊರೋನ ಚಿಕಿತ್ಸೆಗಾಗಿ...ಲಾಕ್‌ಡೌನ್ ಸಂತ್ರಸ್ತರಿಗಾಗಿ....’’ ಕಾಸಿ ಮೆಲ್ಲಗೆ ತನ್ನ ಆತಂಕವನ್ನು ತೆರೆದಿಡಲು ಪ್ರಯತ್ನಿಸಿದ.

‘‘ನೋಡಿ....ತಟ್ಟೆ ಬಾರಿಸಿ ಕೊರೋನ ಓಡಿಸಿದವರು ಯಾರು? ದೀಪ ಹಚ್ಚಿ ಕೊರೋನ ಓಡಿಸಿದವರು ಯಾರು? ಆತ್ಮ ನಿರ್ಭರ್ ಯೋಜನೆಯ ಮೂಲಕ ಈ ದೇಶದ ಆರ್ಥಿಕತೆಯನ್ನು ಮತ್ತೆ ಮೇಲೆತ್ತಿ ನಿಲ್ಲಿಸಿದವರು ಯಾರು? ಇವೆಲ್ಲವನ್ನು ಪಿಎಂ ಮಾಡಿರುವುದರಿಂದ ಅವರ ರಕ್ಷಣೆಯೇ ದೇಶದ ರಕ್ಷಣೆ. ಆದುದರಿಂದ ಅವರ ರಕ್ಷಣೆಗಾಗಿ ಪಿಎಂ ಕೇರ್ಸ್‌ನ್ನು ಸ್ಥಾಪಿಸಲಾಗಿದೆ. ಇದನ್ನು ಪ್ರಶ್ನಿಸುವವರು ದೇಶ ವಿರೋಧಿಗಳು. ....’’ ಚೌಕೀದಾರರು ಕೆಂಡಾಮಂಡಲವಾಗಿ ನುಡಿದರು.
‘‘ಸಾರ್ ವಲಸೆ ಕಾರ್ಮಿಕರ ರಕ್ಷಣೆಗಾಗಿ ನಿಮ್ಮ ಬಳಿ ಯಾವ ಯೋಜನೆಯಿದೆ?’’ ಕಾಸಿ ವಿಷಯಾಂತರ ಮಾಡಿದ.

‘‘ನೋಡಿ...ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಶಾಶ್ವತವಾಗಿ ಇಲ್ಲವಾಗಿಸುವ ಯೋಜನೆ ನನ್ನ ಬಳಿಯಿದೆ. ಈಗಾಗಲೇ ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದೇವೆ ಮತ್ತು ಯಶಸ್ವಿಯೂ ಆಗಿದೆ. ವಲಸೆ ಕಾರ್ಮಿಕರು ಸಹಕರಿಸಿದರೆ ಯೋಜನೆಯನ್ನು ಕಾರ್ಯಗತಗೊಳಿಸುತ್ತೇವೆ...’’
‘‘ಹೇಗೆ ಸಾರ್?’’
‘‘ಹೇಗೆ ಎಂದರೆ...ಇನ್ನಷ್ಟು ರೈಲುಗಳನ್ನು ಬಿಡುವ ಮೂಲಕ...’’ ಚೌಕೀದಾರರು ಸರಳವಾಗಿ ವಿವರಿಸಿದರು.
‘‘ಅಂದರೆ ವಲಸೆ ಕಾರ್ಮಿಕರಿಗಾಗಿ ಪುಕ್ಕಟೆ ರೈಲು ಒದಗಿಸುತ್ತೀರಾ?’’
‘‘ಹೌದು. ಹಳಿಗಳ ಮೇಲೆ ನಾವು ಇನ್ನಷ್ಟು ರೈಲುಗಳನ್ನು ಬಿಡಲು ಸಿದ್ಧ. ಆದರೆ ವಲಸೆ ಕಾರ್ಮಿಕರೂ ನಮ್ಮ ಜೊತೆಗೆ ಸಹಕರಿಸಬೇಕು...’’ ಚೌಕೀದಾರರು ತಿಳಿಸಿದರು.
‘‘ಅಂದರೆ...’’
‘‘ನೋಡಿ...ವಲಸೆ ಕಾರ್ಮಿಕರು ನಗರಗಳ ರಸ್ತೆ ಬದಿಯಲ್ಲಿ, ಹೆದ್ದಾರಿಗಳಲ್ಲಿ ಮಲಗಿದರೆ ನಾವು ರೈಲು ಗಳನ್ನು ಬಿಟ್ಟು ಏನು ಪ್ರಯೋಜನ?’’
‘‘ಹಾಗಾದರೆ...ಅವರನ್ನು ಪುಕ್ಕಟೆಯಾಗಿ...ರೈಲು ಮೂಲಕ ಊರಿಗೆ ಕಳುಹಿಸಲು ಸಿದ್ಧರಿದ್ದೀರಿ ಎಂದಾಯಿತು’’ ಕಾಸಿ ಖುಷಿಯಾಗಿ ಕೇಳಿದ.

‘‘ಹಾಗೆಂದು ನಾನು ಎಲ್ಲಿ ಹೇಳಿದೆ? ಅವರು ರಸ್ತೆಯಲ್ಲಿ ಮಲಗುವ ಬದಲು, ರೈಲು ಹಳಿಯಲ್ಲಿ ಮಲಗಲಿ ಎಂದು ಹೇಳಿದೆ. ಅವರು ಸಹಕರಿಸಿದರೆ ನಾನು ಎಷ್ಟು ರೈಲುಗಳನ್ನು ಬೇಕಾದರೂ ಪುಕ್ಕಟೆಯಾಗಿ ಬಿಡಲು ಸಿದ್ಧನಿದ್ದೇನೆ....’’ ಚೌಕೀದಾರರು ಪರಿಹಾರ ಸೂಚಿಸಿದರು.

ಕಾಸಿ ಒಮ್ಮೆಲೆ ಮೌನವಾದ. ಅವನಿಗೆಲ್ಲ ಅರ್ಥವಾಯಿತು. ‘‘ಸಾರ್...ಪಿಎಂ ಕೇರ್ಸ್ ಫಂಡ್ ಹಣ ಹೇಗೆ ಸದುಪಯೋಗ ಪಡಿಸುತ್ತೀರಿ?’’ ಕೊನೆಯ ಪ್ರಶ್ನೆಯೊಂದನ್ನು ಕೇಳಿದ.

‘‘ಕುದುರೆ ವ್ಯಾಪಾರದಿಂದಾಗಿ ಈಗಾಗಲೇ ದೇಶದ ಜಿಡಿಪಿ ಹೆಚ್ಚಳವಾಗಿದೆಯಂತೆ. ಪಿಎಂ ಕೇರ್ಸ್ ಫಂಡ್‌ನ ಹೂಡಿಕೆಯಿಂದ ಇದು ಸಾಧ್ಯವಾಗಿದೆ....ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿ ಹೂಡಿಕೆ ಮಾಡಿ ದೇಶದ ಜಿಡಿಪಿ ಹೆಚ್ಚಳ ಮಾಡುವ ಉದ್ದೇಶ ನಮಗಿದೆ....’’ ಚೌಕೀದಾರ್ ತಿಳಿಸಿದರು. ‘‘ಟೇಕ್ ಕೇರ್ ಸರ್’’ ಎನ್ನುತ್ತಾ ಕಾಸಿ ಅಲ್ಲಿಂದ ತೊಲಗಿದ. 

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News