'ಗೌರಿ ಲಂಕೇಶ್ ನೆನಪಿದೆಯಾ?': ಪತ್ರಕರ್ತೆ ರಾಣಾ ಅಯ್ಯೂಬ್‌ ಗೆ ಕೊಲೆ, ಅತ್ಯಾಚಾರದ ಬೆದರಿಕೆ

Update: 2020-07-03 15:59 GMT

ಹೊಸದಿಲ್ಲಿ,ಜು.3: ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರ ಕುರಿತು ಪೋಸ್ಟ್‌ನ ಬಳಿಕ ಫೇಸ್‌ಬುಕ್,ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ಗಳಲ್ಲಿ ತನಗೆ ಹಲವಾರು ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆ ಎಂದು ಪತ್ರಕರ್ತೆ ರಾಣಾ ಅಯ್ಯೂಬ್ ಅವರು ಶುಕ್ರವಾರ ಆರೋಪಿಸಿದ್ದಾರೆ. ಇಂತಹ ಬೆದರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬುಧವಾರ ಕಾಶ್ಮೀರದ ಸೋಪುರ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿಗಳ ನಡುವಿನ ಗುಂಡಿನ ಕಾಳಗದಲ್ಲಿ ಶ್ರೀನಗರ ನಿವಾಸಿ ಬಷೀರ್ ಅಹ್ಮದ್ ಖಾನ್(65) ಸಾವನ್ನಪ್ಪಿದ ಬಗ್ಗೆ ತಾನು ಧ್ವನಿಯೆತ್ತಿದ ಬಳಿಕ ಈ ಬೆದರಿಕೆಗಳು ಬರತೊಡಗಿವೆ ಎಂದು ಅಯ್ಯೂಬ್ ಹೇಳಿದ್ದಾರೆ.

ಖಾನ್ ಹತ್ಯೆಯು ಕಾಶ್ಮೀರ ಕಣಿವೆಯಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದ್ದು, ಅವರ ಮೃತದೇಹದ ಮೇಲೆ ಮೊಮ್ಮಗ ಕುಳಿತುಕೊಂಡು ಅಳುತ್ತಿದ್ದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಪ್ರತಿ ಬಾರಿ ನಾನು ಕಾಶ್ಮೀರದ ಬಗ್ಗೆ ಬರೆದಾಗ ಅಥವಾ ಮಾತನಾಡಿದಾಗೆಲ್ಲ ನನ್ನ ವಿರುದ್ಧ ಊಹಿಸಲೂ ಸಾಧ್ಯವಿಲ್ಲದ ದ್ವೇಷ ಪ್ರದರ್ಶನಗೊಳ್ಳುತ್ತದೆ. ಆದರೆ ಈ ಸಲ ಅವರು ರಾಜಾರೋಷ ಬೆದರಿಕೆಯನ್ನು ಒಡ್ಡಿದ್ದಾರೆ. ಹಿಂದೆಲ್ಲ ಅವರು ನೇರವಾಗಿ ಬೆದರಿಕೆಯ ಭಾಷೆಯನ್ನು ಬಳಸುತ್ತಿರಲಿಲ್ಲ ’ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಯ್ಯೂಬ್ ತಿಳಿಸಿದರು.

‘ಕಳೆದೆರಡು ದಿನಗಳಲ್ಲಿ ನನ್ನ ಸಾಮಾಜಿಕ ಜಾಲತಾಣ ಖಾತೆಗಳು ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳಿಂದ ತುಂಬಿಹೋಗಿವೆ ’ಎಂದು ಶುಕ್ರವಾರ ಮಧ್ಯಾಹ್ನ ಟ್ವೀಟಿಸಿರುವ ಅಯ್ಯೂಬ್, ಪ್ರಣಯ ಭೌಮಿಕ್ ಎಂಬಾತನ ಬೆದರಿಕೆಯ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ.

ಭೌಮಿಕ್ ಅತ್ಯಂತ ಅಸಭ್ಯ ಭಾಷೆಯನ್ನು ಬಳಸಿದ್ದು ಮಾತ್ರವಲ್ಲ,ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಿದ್ದಾನೆ,ಕಾಶ್ಮೀರಿಗಳು ಮತ್ತು ಮುಸ್ಲಿಮರ ವಿರುದ್ಧ ನಿಂದನೆಗಳ ಮಳೆಯನ್ನೇ ಸುರಿಸಿದ್ದಾನೆ.

ಇನ್ನೊಂದು ಸ್ಕ್ರೀನ್ ಶಾಟ್‌ನಲ್ಲಿ ‘ಹಿಂದು ರಾಷ್ಟ್ರ’ ಎಂಬ ಖಾತೆಯು 2017ರಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ರನ್ನು ನೆನಪಿಸಿಕೊಳ್ಳುವಂತೆ ಅಯ್ಯೂಬ್‌ಗೆ ಸೂಚಿಸಿದೆ.

ಗೌರಿ ಲಂಕೇಶರನ್ನು ನೆನಪಿಸಿಕೊಳ್ಳ್ಳುವಂತೆ ಬೆದರಿಕೆ ಅಯ್ಯೂಬ್ ಅವರಲ್ಲಿ ಆತಂಕವನ್ನು ಮೂಡಿಸಿದೆ.

‘‘ಗೌರಿಯವರ ಹತ್ಯೆಗೆ ಮುನ್ನ,ನನ್ನ ವಿರುದ್ಧ ಬಹಳಷ್ಟು ದ್ವೇಷವನ್ನು ಕಾರಲಾಗುತ್ತಿದ್ದ ಸಮಯದಲ್ಲಿ ನನ್ನ ಫೇಸ್‌ಬುಕ್ ಖಾತೆಯಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದ ಅವರು “ನೀವು ಚಿಂತಿಸಬೇಕಿಲ್ಲ,ಅವರೇನೂ ಮಾಡುವುದಿಲ್ಲ ಎಂದು ಧೈರ್ಯ ತುಂಬಿದ್ದರು. ಮೂರು ದಿನಗಳ ಬಳಿಕ ಅವರ ಹತ್ಯೆ ನಡೆದಿತ್ತು. ಹೀಗಾಗಿ ಈ ಆನ್‌ಲೈನ್ ದ್ವೇಷ ಆಫ್‌ಲೈನ್‌ಗಿಳಿದರೆ ಏನು ಗತಿ ಎಂಬ ಭೀತಿ ಸದಾ ಕಾಡುತ್ತಿರುತ್ತದೆ” ಎಂದೂ ಅಯ್ಯೂಬ್ ಹೇಳಿದ್ದಾರೆ.

ಮೋದಿ ಸರಕಾರದ ಕಟು ಟೀಕಾಕಾರರಾಗಿರುವ ಅಯ್ಯೂಬ್,ಬುಧವಾರ ಖಾನ್ ಹತ್ಯೆ ಕುರಿತು ಟ್ವೀಟಿಸಿದ ಬಳಿಕ ಅವರ ವಿರುದ್ಧ ದಾಳಿ ಆರಂಭಗೊಂಡಿತ್ತು. ‘ಕಾಶ್ಮೀರ ವಿಷಯದಲ್ಲಿ ಮಾನವತಾವಾದಿಗಳಿಲ್ಲ, ಇರುವುದು ಅನುಕೂಲಕರ ರಾಷ್ಟ್ರವಾದಿಗಳು ಮಾತ್ರ ’ಎಂದು ಟ್ವೀಟಿಸಿದ್ದ ಅವರು, ತನ್ನ ಪತಿಯ ಸಾವಿಗೆ ಸಿಆರ್‌ಪಿಎಫ್ ಕಾರಣ ಎಂದು ಖಾನ್ ಅವರ ಪತ್ನಿ ದೂರಿದ್ದನ್ನು ಉಲ್ಲೇಖಿಸಿ ಗುರುವಾರ ಇನ್ನೊಂದು ಟ್ವೀಟ್‌ನ್ನು ಮಾಡಿದ್ದರು.

ಸಿಆರ್‌ಪಿಎಫ್ ಸಿಬ್ಬಂದಿಗಳು ಖಾನ್‌ರನ್ನು ಕಾರಿನಿಂದ ಹೊರಗೆಳೆದು ತುಂಬ ಹತ್ತಿರದಿಂದ ಗುಂಡು ಹಾರಿಸಿದ್ದರು ಎಂದು ಅವರ ಕುಟುಂಬವು ಆನ್‌ಲೈನ್ ವೀಡಿಯೊ ಸಂದೇಶದಲ್ಲಿ ಆರೋಪಿಸಿದೆ. ಕಾಶ್ಮೀರದ ಐಜಿಪಿ ವಿಜಯ ಕುಮಾರ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News