ಕೊರೋನ ಪರಿಸ್ಥಿತಿ ಜೂನ್ ಗಿಂತ ಉತ್ತಮವಾಗಿದೆ: ಕೇಜ್ರಿವಾಲ್

Update: 2020-07-15 16:19 GMT

ಹೊಸದಿಲ್ಲಿ, ಜು. 15: ಹೊಸದಿಲ್ಲಿಯಲ್ಲಿ ಪ್ರಸ್ತುತ ಕೊರೋನ ಪರಿಸ್ಥಿತಿ ಜೂನ್ ತಿಂಗಳಿಗಿಂತ ಉತ್ತಮವಾಗಿದೆ. ಆದರೆ, ಕೊರೋನಾ ವಿರುದ್ಧದ ಯುದ್ಧವನ್ನು ನಾವು ಇದುವರೆಗೆ ಗೆದ್ದಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.

ಕೊರೋನ ವಿರುದ್ಧ ದಿಲ್ಲಿ ಸರಕಾರ ಏಕಾಂಗಿಯಾಗಿ ಹೋರಾಟ ನಡೆಸಿದ್ದರೆ, ಅದು ವಿಫಲವಾಗುತ್ತಿತ್ತು. ಅದಕ್ಕೆ ನಾವು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಸರಕಾರೇತರ ಸಂಸ್ಥೆ ಹಾಗೂ ಇತರ ಸಂಘಟನೆಗಳ ಬೆಂಬಲ ಕೋರಿದೆವು ಎಂದು ಅವರು ತಿಳಿಸಿದರು.

ನಮ್ಮ ಮೊದಲ ತತ್ವ ಕೊರೋನ ವಿರುದ್ಧದ ಯುದ್ಧವನ್ನು ಏಕಾಂಗಿಯಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬುದಾಗಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಹೆಚ್ಚುತ್ತಿರುವ ಕೊರೋನ ಪ್ರಕರಣಗಳನ್ನು ನಿಯಂತ್ರಿಸಲು ಆಪ್ ಸರಕಾರ ತನ್ನ ಸಿದ್ಧತೆ ಮುಂದುವರಿಸಿದೆ ಎಂದು ಅವರು ತಿಳಿಸಿದ್ದಾರೆ.

ಆನ್ ಲೈನ್ ಮಾದ್ಯಮದಲ್ಲಿ ಮಾತನಾಡಿದ ಕೇಜ್ರಿವಾಲ್, ಜುಲೈ 15ರ ಹೊತ್ತಿಗೆ ದಿಲ್ಲಿಯಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 2.25 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಕೇಂದ್ರ ಸರಕಾರ ನಿರೀಕ್ಷಿಸಿತ್ತು. ಆದರೆ, ಇಂದಿನ ವರೆಗೆ ಕೇವಲ 1.15 ಲಕ್ಷ ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News