ದಲಿತ ದಂಪತಿಯ ಬೆಳೆ ನಾಶಗೈದು ಮಕ್ಕಳ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು; ವಿಷ ಕುಡಿದ ದಂಪತಿ

Update: 2020-07-16 11:35 GMT

ಮಧ್ಯಪ್ರದೇಶ: ದಲಿತ ದಂಪತಿ ಬೆಳೆದಿದ್ದ ಬೆಳೆಗಳನ್ನು ಕಂದಾಯ ಅಧಿಕಾರಿಗಳು ನಾಶಪಡಿಸುತ್ತಿರುವುದು ಮತ್ತು ಇದರಿಂದ ಮನನೊಂದ ದಂಪತಿ ವಿಷ ಸೇವಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಭಾರೀ ಆಕ್ರೋಶ ಸೃಷ್ಟಿಸಿದೆ.

ದಂಪತಿ ವಾಸವಿದ್ದ ಜಾಗ ಸರಕಾರಕ್ಕೆ ಸೇರಿದ್ದು, ಅಲ್ಲಿ ಕಾಲೇಜು ನಿರ್ಮಾಣದ ಹಿನ್ನೆಲೆಯಲ್ಲಿ ಬಲವಂತವಾಗಿ ದಂಪತಿಯನ್ನು ಒಕ್ಕಲೆಬ್ಬಿಸಲಾಗುತ್ತಿತ್ತು. ದಂಪತಿ ಬೆಳೆದಿದ್ದ ಬೆಳೆಯನ್ನು ಕಣ್ಣೆದುರಲ್ಲೇ ಅಧಿಕಾರಿಗಳು ನಾಶಗೈದರು. ಈ ಸಂದರ್ಭ ದಂಪತಿ ಕೀಟನಾಶಕ ಸೇವಿಸಿದರು.

ದಂಪತಿಯನ್ನು ಎಳೆದೊಯ್ಯುವ ಪೊಲೀಸರು ಬಯಲಲ್ಲಿ ಅವರಿಗೆ ಥಳಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಕೂಡಲೇ ಮಕ್ಕಳು ಓಡಿ ಬಂದು ಹೆತ್ತವರನ್ನು ರಕ್ಷಿಸಲು ಯತ್ನಿಸಿದರೂ ಪೊಲೀಸರು ಅವರನ್ನು ದೂರ ತಳ್ಳುವುದು ಕಾಣಿಸುತ್ತದೆ.

 ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಮ್ಮ ಹೋರಾಟ ಈ ಮನಸ್ಥಿತಿ ಮತ್ತು ಅನ್ಯಾಯದ ವಿರುದ್ಧ” ಎಂದಿದ್ದಾರೆ.

ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಗುಣಾ ಎಸ್ಪಿ ಮತ್ತು ಕಲೆಕ್ಟರನ್ನು ಅಮಾನತುಗೊಳಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News