ಬಾಲಿವುಡ್‍ಗೆ 'ಗುಡ್‍ಬೈ' ಹೇಳಿದ ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ

Update: 2020-07-22 07:25 GMT

ಮುಂಬೈ: ತಾವು ಈಗಾಗಲೇ ಸಾಕಷ್ಟು ಕಷ್ಟ ಅನುಭವಿಸಿರುವುದರಿಂದ ಬಾಲಿವುಡ್‍ಗೆ ರಾಜೀನಾಮೆ ನೀಡುವುದಾಗಿ ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ ಹೇಳಿದ್ದಾರೆ. 'ಥಪ್ಪಡ್' ಖ್ಯಾತಿಯ ಸಿನ್ಹಾ ಅವರ ಹೇಳಿಕೆಯ ಬೆನ್ನಲ್ಲೇ ಸುಧೀರ್ ಮಿಶ್ರಾ ಹಾಗೂ ಹನ್ಸಲ್ ಮೆಹ್ತಾ ಕೂಡ ಅಂತಹುದೇ ಟ್ವೀಟ್ ಮಾಡಿದ್ದರೆ.

"ಸಾಕು, ನಾನು ಈ ಮೂಲಕ ಬಾಲಿವುಡ್‍ಗೆ ರಾಜೀನಾಮೆ ನೀಡುತ್ತೇನೆ. ಅದು ಏನು ಬೇಕಾದರೂ ಅರ್ಥ ನೀಡಲಿ,'' ಎಂದು ಸಿನ್ಹಾ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ ಇನ್ನೊಬ್ಬ ನಿರ್ದೇಶಕ ಸುಧೀರ್ ಮಿಶ್ರಾ, "ಬಾಲಿವುಡ್ ಅಂದರೇನು? ನಾನು ಸತ್ಯಜಿತ್ ರೇ, ರಾಜ್ ಕಪೂರ್, ಗುರುದತ್ತ್, ರಿತ್ವಿಕ್ ಘಟಕ್, ಬಿಮಲ್ ರಾಯ್, ಮೃಣಾಲ್ ಸೇನೆ, ಹೃಷಿಕೇಶ್ ಮುಖರ್ಜಿ, ಕಾಸಿಫ್, ವಿಜಯ್ ಆನಂದ್, ಜಾವೇದ್ ಅಖ್ತರ್, ತಪನ್ ಸಿನ್ಹಾ, ಗುಲ್ಜಾರ್, ಶೇಖರ್ ಕಪೂರ್, ಕೇತನ್ ಮೆಹತಾ,  ಭರತನ್ ಮತ್ತು ಅರವಿಂದನ್ ಮತ್ತಿತರರಿಂದ ಸ್ಫೂರ್ತಿ ಪಡೆದು ಸಿನೆಮಾದ ಭಾಗವಾಗಲು ಬಂದೆ. ನಾನು ಅಲ್ಲೇ ಯಾವತ್ತೂ ಇರುತ್ತೇನೆ," ಎಂದು ಬರೆದಿದ್ದಾರೆ.

ಇದನ್ನು ರಿಟ್ವೀಟ್ ಮಾಡಿದ ಅನುಭವ್ "ಜನರೇ, ನಾವು ಬಾಲಿವುಡ್‍ನಿಂದ ಹೊರಹೋಗೋಣ, ನಾವು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿ ಚಿತ್ರಗಳನ್ನು ನಿರ್ಮಿಸುವುದನ್ನು ಮುಂದುವರಿಸೋಣ,'' ಎಂದು ಬರೆದು ಕವಿ  ಸೂರದಾಸ್ ಅವರ 'ಮಯ್ಯಾ ಮೋರಿ ಮೈ ನಹೀನ್ ಮಾಖನ್ ಖಾಯೋ' ಎಂಬ  ಕವನದ ಒಂದು ಭಾಗ `ಯೇ ಲೇತಿ ಅಪ್ನಿ ಲಕೂಟಿ ಕಮರಿಯಾ ಬಹುತಹೀನ್ ನಾಚ್ ನಚಾಯೊ'' ತೆಗೆದುಕೊಳ್ಳಿ ನಿಮ್ಮ ಕೋಲು ಮತ್ತು ಚಾದರ, ನೀವು ನನ್ನನ್ನು ಬಹಳ ಕುಣಿಸಿದ್ದೀರಿ, ಎಂಬರ್ಥ ನೀಡುವ ಒಂದು  ಭಾಗವನ್ನು ಉಲ್ಲೇಖಿಸಿದ್ದಾರೆ.

ಇದಾದ ಸ್ವಲ್ಪ ಹೊತ್ತಿನಲ್ಲಿಯೇ ನಿರ್ದೇಶಕ ಹನ್ಸಲ್ ಮೆಹ್ತಾ ಟ್ವೀಟ್ ಮಾಡಿ "ಛೋಡ್ ದಿಯಾ,  ಮೊದಲನೆಯದಾಗಿ ಅದು ಅಸ್ತಿತ್ವದಲ್ಲಿಯೇ ಇರಲಿಲ್ಲ,'' ಎಂದು ಬಾಲಿವುಡ್ ಅನ್ನು ಉಲ್ಲೇಖಿಸಿ ಬರೆದಿದ್ದಾರೆ.

ಅನುಭವ್ ಸಿನ್ಹಾ ತಮ್ಮ ಟ್ವಿಟ್ಟರ್ ಹೆಸರನ್ನು ಅನುಭವ್ ಸಿನ್ಹಾ (ನಾಟ್ ಬಾಲಿವುಡ್) ಎಂದು ಬದಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News