ಮಧ್ಯಪ್ರದೇಶ: ಇನ್ನೋರ್ವ ಕಾಂಗ್ರೆಸ್ ಶಾಸಕ ರಾಜೀನಾಮೆ

Update: 2020-07-23 15:31 GMT

ಭೋಪಾಲ್, ಜು. 23: ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ನಾರಾಯಣ ಪಟೇಲ್ ಗುರುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಸ್ವೀಕರಿಸಿದ್ದಾರೆ.

ಪಟೇಲ್ ಬಿಜೆಪಿಗೆ ಸೇರುವ ಸಾಧ್ಯತೆ ಇದೆ. ಪಟೇಲ್ ಅವರ ರಾಜೀನಾಮೆಯೊಂದಿಗೆ ಇದುವರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಕಳೆದ ಮಾರ್ಚ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ 22 ಶಾಸಕರು ರಾಜೀನಾಮೆ ನೀಡಿದ್ದರು. ಕಳೆದ ವಾರ ಬುರ್ಹಾನ್‌ಪುರದ ನೇಪನಗರದ ಕಾಂಗ್ರೆಸ್ ಶಾಸಕಿ ಸುಮಿತ್ರಾ ದೇವಿ ಕಸ್ಡೇಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಹಾಗೂ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅನಂತರ ಬಡಾ ಮಲ್ಹೆರಾದ ಕಾಂಗ್ರೆಸ್ ಶಾಸಕ ಪ್ರಧ್ಯುಮ್ನ ಸಿಂಗ್ ಲೋಧಿ ಕೂಡ ರಾಜೀನಾಮೆ ನೀಡಿದ್ದರು.

ಶಾಸಕರ ನಿರಂತರ ರಾಜೀನಾಮೆಯಿಂದ ರಾಜ್ಯ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 89ಕ್ಕೆ ಇಳಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ, ‘‘ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ. ಇದಕ್ಕೆ ಸಾರ್ವಜನಿಕರ ಹಣವನ್ನು ವಿನಿಯೋಗಿಸುತ್ತಿದೆ’’ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News