'ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮದಿಂದ ದಲಿತರನ್ನು ದೂರವಿರಿಸಲಾಗಿದೆ'
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಾಳೆ ನಡೆಯಲಿರುವ ಭೂಮಿ ಪೂಜೆ ಸಮಾರಂಭಕ್ಕೆ ಆಹ್ವಾನ ನೀಡುವಾಗ ದಲಿತರನ್ನು ಹಾಗೂ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರ ಪಕ್ಷ ಅಪ್ನಾ ದಳ(ಎಸ್) ಶಾಸಕ ಚೌಧುರಿ ಅಮರ್ ಸಿಂಗ್ ಆರೋಪಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತೋರಿಸಿರುವ ಅವಸರವನ್ನು ಬಡವರಿಗೆ ಮನೆಗಳ ನಿರ್ಮಾಣ ಹಾಗೂ ಪಿಂಚಣಿ ನೀಡುವಲ್ಲಿಯೂ ತೋರಿಸಬೇಕು ಎಂದು ಅವರು ಹೇಳಿದ್ದಾರೆ.
“ರಾಮ ಮಂದಿರಕ್ಕಾಗಿ ಶ್ರಮ ಪಟ್ಟವರ ಮುಖಗಳು ಕಾಣಿಸುತ್ತಿಲ್ಲ. ಅವರನ್ನು ಕಡೆಗಣಿಸಲಾಗುತ್ತಿದೆ. ಮಂದಿರ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟ್ ನಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರನ್ನು ಸೇರಿಸಲಾಗಿಲ್ಲ. ಅದೊಂದು `ವೇದ್ ಪ್ರಥಾ ಟ್ರಸ್ಟ್.' ಹಾಗೂ ಶ್ರೀ ರಾಮ ಕೇವಲ ಬಿಜೆಪಿಗೆ ಮೀಸಲು ಎಂಬಂತಿದೆ” ಎಂದು ಸಿಂಗ್ ಹೇಳಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನೂ ಸಮಾರಂಭಕ್ಕೆ ಆಹ್ವಾನಿಸಬೇಕು ಎಂದೂ ಅವರು ಆಗ್ರಹಿಸಿದರು.