ಜಮ್ಮು-ಕಾಶ್ಮೀರ ತನ್ನದೇ ಆದ ಮುಖ್ಯಮಂತ್ರಿಯನ್ನು ಹೊಂದಲು ಬದ್ಧ: ಮೋದಿ
Update: 2020-08-15 16:02 GMT
ಹೊಸದಿಲ್ಲಿ,ಆ.15: ಹಾಲಿ ಪ್ರಗತಿಯಲ್ಲಿರುವ ಕ್ಷೇತ್ರ ಪುನರ್ವಿಂಗಡಣೆ ಕಾರ್ಯವು ಬಾಕಿಯಿದ್ದರೂ ಜಮ್ಮು-ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆಗಳು ನಡೆಯಬಹುದು ಎಂದು ತನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ,ಈ ಕೇಂದ್ರಾಡಳಿತ ಪ್ರದೇಶವು ತನ್ನದೇ ಆದ ಮುಖ್ಯಮಂತ್ರಿ ಮತ್ತು ಸಚಿವರನ್ನು ಹೊಂದುವಂತೆ ಮಾಡಲು ತನ್ನ ಸರಕಾರವು ಬದ್ಧವಾಗಿದೆ ಎಂದರು.
ಕಳೆದ ವರ್ಷವು ಜಮ್ಮು-ಕಾಶ್ಮೀರದ ಪಾಲಿಗೆ ಅಭಿವೃದ್ಧಿಯ ಪಯಣವಾಗಿತ್ತು ಮತ್ತು ಅಲ್ಲಿಯ ನಿರಾಶ್ರಿತರಿಗೆ ‘ಘನತೆಯ ಬದುಕು’ ದೊರಕಿದೆ ಎಂದು ಹೇಳಿದರು.
ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಬಹಳಷ್ಟು ಚಿಂತನೆಯ ಬಳಿಕ ಕೈಗೊಂಡ ಕ್ರಮವಾಗಿತ್ತು ಎಂದ ಅವರು, ‘ಚುನಾವಣೆಗಳು ನಡೆಯಬೇಕು ಎಂದು ನಾವು ಬಯಸಿದ್ದೇವೆ. ಜನರಿಗೆ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಶೀಘ್ರವೇ ಅವಕಾಶ ದೊರೆಯಲಿದೆ. ಅವರು ತಮ್ಮ ಶಾಸಕರನ್ನು,ಸಚಿವರನ್ನು ಮತ್ತು ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ’ ಎಂದರು.