ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ: ಒಳಗಿದ್ದ ಮೂವರಿಗೆ ಸುಟ್ಟ ಗಾಯ

Update: 2020-08-18 18:10 GMT
ಸಾಂದರ್ಭಿಕ ಚಿತ್ರ

ವಿಜಯವಾಡಾ,ಆ.18: ರಸ್ತೆಬದಿ ನಿಲ್ಲಿಸಲಾಗಿದ್ದ ಕಾರಿಗೆ ಬೆಂಕಿ ಹಚ್ಚಿದ ಘಟನೆ ಸೋಮವಾರ ಇಲ್ಲಿ ನಡೆದಿದೆ. ಈ ವೇಳೆ ಅದರಲ್ಲಿದ್ದ ಮೂವರಿಗೆ ಸುಟ್ಟ ಗಾಯಗಳಾಗಿದ್ದು,ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ರಿಯಲ್ ಎಸ್ಟೇಟ್ ವಿವಾದ ಈ ಕೃತ್ಯಕ್ಕೆ ಕಾರಣವೆಂದು ಶಂಕಿಸಲಾಗಿದೆ,

ಕಾರಿಗೆ ಬೆಂಕಿ ಹಚ್ಚಿದ್ದ ವೇಣುಗೋಪಾಲ ರೆಡ್ಡಿ ಎಂಬಾತ ಪರಾರಿಯಾಗಿದ್ದು,ಆತನ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಕೆಲವು ಸಮಯದ ಹಿಂದೆ ರೆಡ್ಡಿ ಮತ್ತು ಗಂಗಾಧರ ಪಾಲುದಾರಿಕೆಯಲ್ಲಿ ಹಳೆಯ ಕಾರುಗಳ ಖರೀದಿ ಮತ್ತು ಮಾರಾಟ ವ್ಯವಹಾರವನ್ನು ನಡೆಸುತ್ತಿದ್ದರು. ಆದರೆ ವ್ಯವಹಾರದಲ್ಲಿ ನಷ್ಟವುಂಟಾಗಿದ್ದರಿಂದ ಇಬ್ಬರೂ ಪಾಲುದಾರಿಕೆ ಮುರಿದುಕೊಂಡಿದ್ದರು.

ರೆಡ್ಡಿ ಗಂಗಾಧರನ ಜೊತೆ ಮಾತುಕತೆಗೆ ಪ್ರಯತ್ನಿಸುತ್ತಿದ್ದ,ಆದರೆ ಆತ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ ಎಂದು ತಿಳಿಸಿದ ಪೊಲೀಸರು,ಸೋಮವಾರ ಗಂಗಾಧರ ತನ್ನ ಪತ್ನಿ ಮತ್ತು ಸ್ನೇಹಿತನ ಜೊತೆ ರೆಡ್ಡಿಯನ್ನು ಭೇಟಿಯಾಗಲು ತೆರಳಿದ್ದ. ರಸ್ತೆಯ ಬಳಿ ಕಾರು ನಿಲ್ಲಿಸಿ ಮಾತನಾಡುತ್ತಿದ್ದಾಗ ರೆಡ್ಡಿ ಸಿಗರೇಟ್ ಸೇವನೆಯ ನೆಪ ಹೇಳಿ ಕಾರಿನಿಂದ ಹೊರಗೆ ಬಂದಿದ್ದ ಮತ್ತು ವಿಸ್ಕಿ ಬಾಟಲ್‌ನಲ್ಲಿ ತಂದಿದ್ದ ಪೆಟ್ರೋಲ್‌ನ್ನು ಕಾರಿನ ಮೇಲೆ ಸುರುವಿ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದರು.

ಘಟನೆಯಲ್ಲಿ ದಂಪತಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದರೆ,ಗಂಗಾಧರನ ಸ್ನೇಹಿತನಿಗೆ ತೀವ್ರ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News