ಕೊರೋನ ಎಂಬ ‘ದೇವರ ಆಟ’ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ: ನಿರ್ಮಲಾ ಸೀತಾರಾಮನ್

Update: 2020-08-27 14:56 GMT

ಹೊಸದಿಲ್ಲಿ, ಆ.27: “ಈ ವರ್ಷ ನಾವು ಅಸಾಮಾನ್ಯ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ನಾವು ಕೊರೋನ ಸೋಂಕು ಎಂಬ ದೇವರ ಆಟವನ್ನು ಎದುರಿಸಬೇಕಿದ್ದು ಇದರಿಂದ ನಮ್ಮ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ” ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಜಿಎಸ್‌ಟಿ ಸಂಗ್ರಹದಲ್ಲಿ ತಮ್ಮ ಪಾಲಿನ ಮೊತ್ತವನ್ನು ತಕ್ಷಣ ಪಾವತಿಸಬೇಕು ಎಂಬ ರಾಜ್ಯ ಸರಕಾರಗಳ ಒತ್ತಡದ ಹಿನ್ನೆಲೆಯಲ್ಲಿ , ಈ ಬಗ್ಗೆ ಚರ್ಚಿಸಲು ನಡೆದ ಜಿಎಸ್‌ಟಿ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, 2021ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಇದಕ್ಕೆ ಕೊರೋನ ವೈರಸ್ ಎಂಬ , ಅನಿರೀಕ್ಷಿತ ದೇವರ ಆಟ ಕಾರಣವಾಗಿದೆ ಎಂದು ಹೇಳಿದರು.

2020ರ ಆರ್ಥಿಕ ವರ್ಷಕ್ಕೆ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಮೊತ್ತವಾಗಿ ಕೇಂದ್ರ ಸರಕಾರ , ಮಾರ್ಚ್ ತಿಂಗಳ 13,806 ಕೋಟಿ ರೂ. ಸೇರಿದಂತೆ ಒಟ್ಟು 1.65 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತ ಬಿಡುಗಡೆ ಮಾಡಿದೆ. ಆದರೆ ಜಿಎಸ್‌ಟಿ ಪರಿಹಾರ ಮೊತ್ತವಾಗಿ ಸಂಗ್ರಹವಾದ ಉಪತೆರಿಗೆ ಮೊತ್ತ ಕೇವಲ 95,444 ಕೋಟಿ ರೂ. ಮಾತ್ರವಾಗಿದೆ ಎಂದವರು ಹೇಳಿದರು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯಗಳು ಜಿಎಸ್‌ಟಿಯಲ್ಲಿ ತಮ್ಮ ಪಾಲಿನ ಮೊತ್ತವನ್ನು ಶೀಘ್ರ ಪಾವತಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಜಿಎಸ್‌ಟಿ ಸಮಿತಿಯ ಸಭೆ ನಡೆದಿತ್ತು. ತಮ್ಮ ಪಾಲಿನ ಜಿಎಸ್‌ಟಿ ಪಾಲನ್ನು ಕೇಂದ್ರ ಸರಕಾರ ಪಾವತಿಸಲು ಬದ್ಧವಾಗಿರಬೇಕು ಎಂದು ಕಾಂಗ್ರೆಸ್ ಆಡಳಿತದ ರಾಜ್ಯಗಳು ಹಾಗೂ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಹೇಳುತ್ತಿವೆ. ಆದರೆ ತೆರಿಗೆ ಸಂಗ್ರಹದಲ್ಲಿ ಕೊರತೆಯಾದರೆ ಆಗ ಈ ರೀತಿಯ ಬದ್ಧತೆ ಇರುವುದಿಲ್ಲ ಎಂಬುದು ಕೇಂದ್ರ ಸರಕಾರದ ವಾದವಾಗಿದೆ.

ಜಿಎಸ್‌ಟಿ ನಿಯಮದ ಪ್ರಕಾರ, ಜಿಎಸ್‌ಟಿ ಜಾರಿಯಾದ (2017ರ ಜುಲೈ 1ರಿಂದ) ದಿನದಿಂದ ಮುಂದಿನ 5 ವರ್ಷದವರೆಗೆ ರಾಜ್ಯಗಳಿಗೆ ಆದಾಯ ನಷ್ಟವಾದರೆ ಅದರ ಮರುಪಾವತಿ ಮಾಡಲಾಗುವುದು. ಅಂದರೆ ರಾಜ್ಯಗಳಿಗೆ 2022ರವರೆಗೆ , ಪ್ರತೀ ವರ್ಷ 14% ಆದಾಯ ಹೆಚ್ಚಳ ಖಾತರಿಯಾಗಿದೆ. ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭ ರಾಜ್ಯಗಳಿಗೆ ಆಗುವ ಆದಾಯ ನಷ್ಟವನ್ನು ಕೇಂದ್ರ ಸರಕಾರ ಫೂರ್ಣ ಭರಿಸಲಿದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕೂಡಾ ಹೇಳಿಕೆ ನೀಡಿದ್ದರು. ರಾಜ್ಯಗಳಿಗೆ ಸಂದಾಯವಾಗಬೇಕಿರುವ ಜಿಎಸ್‌ಟಿ ಮೊತ್ತವನ್ನು ತಡೆ ಹಿಡಿದಿರುವುದು ಪರಮ ಅಪರಾಧವಾಗಿದ್ದು, ಸಾಂವಿಧಾನಿಕ ಭರವಸೆಯಿಂದ ಹಿಂದೆ ಸರಿದಿರುವ ಉಪಕ್ರಮವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ರಾಜ್ಯಗಳಿಗೆ ಎರಡು ಆಯ್ಕೆ

 ರಾಜ್ಯಗಳ ಮುಂದೆ ಎರಡು ಆಯ್ಕೆಯನ್ನು ಇಡಲಾಗಿದೆ. ಆರ್‌ಬಿಐಯ ಮೂಲಕ ಪಾವತಿಸುವ ಆಯ್ಕೆಯೂ ಇದೆ. ತಮಗೆ ಸೂಕ್ತವಾದ ಆಯ್ಕೆಯನ್ನು ಗುರುತಿಸಿ ತಿಳಿಸಲು ರಾಜ್ಯಗಳಿಗೆ 7 ದಿನಗಳ ಅವಕಾಶವಿದೆ. ಈ ವರ್ಷ ಎರಡು ದ್ವಿ-ಮಾಸಿಕ ಪಾವತಿ ವಿಳಂಬವಾಗಿದೆ. ಇದು ಈ ವರ್ಷಕ್ಕೆ ಮಾತ್ರ. ಮುಂದಿನ ವರ್ಷದ ಎಪ್ರಿಲ್‌ನಲ್ಲಿ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಪಾವತಿಯ ಬಗ್ಗೆ ಮತ್ತೆ ಗಮನ ಹರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News