ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಏಳು ಮಂದಿ ಮೃತ್ಯು
Update: 2020-09-04 10:26 GMT
ಚೆನ್ನೈ: ತಮಿಳುನಾಡಿನ ಕಡ್ಡಲೂರು ಜಿಲ್ಲೆಯ ಕಟ್ಟುಮನ್ನರಕೋಯಿಲ್ ಎಂಬಲ್ಲಿನ ಕುರುಂಗುಡಿ ಗ್ರಾಮದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಇಂದು ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಹಾಗೂ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಫ್ಯಾಕ್ಟರಿಯ ಮಾಲಕ ಕೂಡ ಇಂದಿನ ಸ್ಫೋಟದಲ್ಲಿ ಬಲಿಯಾದವರಲ್ಲಿ ಸೇರಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ಕಟ್ಟಡ ಹಾನಿಗೊಂಡಿದೆ.
ಈ ಕಟ್ಟಡದಲ್ಲಿ ಪರವಾನಿಗೆ ಪಡೆದ ಸುಡುಮದ್ದು ತಯಾರಿಸಲಾಗುತ್ತಿತ್ತೇ ಅಥವಾ ಅಕ್ರಮವಾಗಿ ನಾಡಬಾಂಬ್ ತಯಾರಿಸಲಾಗುತ್ತಿತ್ತೇ ಎಂಬುದರ ಕುರಿತು ಪರಿಶೀಲಿಸಲಾಗುವುದು ಎಂದು ಕಡ್ಡಲೂರು ಎಸ್ಪಿ ಅಭಿನವ್ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ಎಲ್ಲಾ ಫ್ಯಾಕ್ಟರಿಗಳು ತಮ್ಮ ಪೂರ್ಣಪ್ರಮಾಣದ ಕಾರ್ಮಿಕರನ್ನು ಬಳಸಿ ಕೆಲಸ ಆರಂಭಿಸಲು ತಮಿಳುನಾಡು ಸರಕಾರ ಅನುಮತಿಸಿದಂತಹ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ.