ಕೊರೋನದಿಂದ ಗುಣಮುಖರಾದ ಬಳಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಹೊಸದಿಲ್ಲಿ,ಸೆ.13: ಕೋವಿಡ್-19 ರೋಗದಿಂದ ಗುಣಮುಖಗೊಂಡಿರುವವರ ಕೊರೋನೋತ್ತರ ಆರೋಗ್ಯ ನಿರ್ವಹಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರವಿವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು,ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಔಷಧಿಗಳ ಸೇವನೆ ಮತ್ತು ಯೋಗಾಭ್ಯಾಸವನ್ನು ಇವು ಒಳಗೊಂಡಿವೆ.
ಕೊರೋನ ವೈರಸ್ ಸೋಂಕಿನಿಂದ ಗುಣಮುಖರಾದ ನಂತರವೂ ಬಳಲಿಕೆ, ಮೈಕೈ ನೋವು, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟಕ್ಕೆ ತೊಂದರೆಯಂತಹ ಲಕ್ಷಣಗಳು ಮುಂದುವರಿದಿರುವವರಿಗಾಗಿ ಈ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ.
►ಚೇತರಿಸಿಕೊಂಡಿರುವ ರೋಗಿಗಳು ಕೋವಿಡ್ ಶಿಷ್ಟಾಚಾರ ಪಾಲನೆಯನ್ನು ಮುಂದುವರಿಸಬೇಕು. ಮಾಸ್ಕ್ಗಳನ್ನು ಧರಿಸಬೇಕು. ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಜೊತೆಗೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು
►ಸಾಕಷ್ಟು ಬಿಸಿನೀರು ಮತ್ತು ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುಷ್ ಔಷಧಿಗಳನ್ನು ಸೇವಿಸಬೇಕು. ಇದಕ್ಕೆ ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು
►ಬೆಳಿಗ್ಗೆ ಒಂದು ಚಮಚ ಚ್ಯವನಪ್ರಾಶ್ ಅನ್ನು ನೀರು ಅಥವಾ ಹಾಲಿನೊಂದಿಗೆ ಸೇವಿಸಬೇಕು
►ಯೋಗ ಮತ್ತು ವಾಕಿಂಗ್ ರೂಪದಲ್ಲಿ ಸೌಮ್ಯ ಅಥವಾ ಮಧ್ಯಮ ವ್ಯಾಯಾಮಗಳನ್ನು ಮಾಡಬೇಕು. ಆರೋಗ್ಯವು ಅನುಮತಿಸಿದರೆ ನಿಯಮಿತ ಮನೆಗೆಲಸಗಳನ್ನು ಮಾಡಬಹುದು. ವೃತ್ತಿಪರರು ತಮ್ಮ ಕೆಲಸವನ್ನು ಹಂತಹಂತವಾಗಿ ಆರಂಭಿಸಬಹುದು
►ಕೋವಿಡ್ ಲಕ್ಷಣಗಳ ನಿವಾರಣೆಗಾಗಿ ಔಷಧಿ ಸೇವನೆಯನ್ನು ಮುಂದುವರಿಸಬೇಕು. ಜೊತೆಗೆ ಸಹಕಾಯಿಲೆಗಳಿದ್ದರೆ ಅವುಗಳಿಗೂ ನಿಯಮಿತವಾಗಿ ಔಷಧಿಗಳನ್ನು ಸೇವಿಸಬೇಕು. ರೋಗಿಗಳು ತಮ್ಮ ಆಮ್ಲಜನಕ ಮಟ್ಟ, ಉಷ್ಣತೆ, ರಕ್ತದೊತ್ತಡ ಮತ್ತು ಮಧುಮೇಹಿಗಳಾಗಿದ್ದಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ನಿಗಾಯಿರಿಸಬೇಕು.
►ನಿರಂತರ ಕೆಮ್ಮು ಇದ್ದರೆ ಲವಣಯುಕ್ತ ನೀರಿನಿಂದ ಮುಕ್ಕಳಿಸಬೇಕು ಮತ್ತು ಗಿಡಮೂಲಿಕೆಗಳನ್ನು ಬಳಸಿ ಆವಿಯನ್ನು ಉಸಿರಾಡಿಸಬೇಕು. ಅಧಿಕ ಜ್ವರ, ಉಸಿರಾಟ ಸಮಸ್ಯೆ, ನಿಶ್ಶಕ್ತಿ ಇತ್ಯಾದಿಗಳ ಲಕ್ಷಣಗಳತ್ತಲೂ ರೋಗಿಗಳು ಗಮನ ಹರಿಸಬೇಕು
►ಆಸ್ಪತ್ರೆಯಿಂದ ಬಿಡುಗಡೆಗೊಂಡ ಏಳು ದಿನಗಳಲ್ಲಿ ಖುದ್ದಾಗಿ ಭೇಟಿ ಅಥವಾ ಆನ್ಲೈನ್ ಮೂಲಕ ವೈದ್ಯರೊಂದಿಗೆ ಸಮಾಲೋಚಿಸಬೇಕು. ನಂತರದ ಚಿಕಿತ್ಸೆಯನ್ನು ಯಾವುದೇ ವೈದ್ಯರು ಅಥವಾ ಆಯುಷ್ ವೈದ್ಯರಿಂದ ಪಡೆಯಬಹುದು
►ಯಾವುದೇ ಸಂದರ್ಭದಲ್ಲಿಯೂ ರೋಗಿಗಳು ಬಹುಚಿಕಿತ್ಸೆ (ವಿವಿಧ ಚಿಕಿತ್ಸೆಗಳ ಸಂಯೋಜನೆ)ಯನ್ನು ಪಡೆಯಬಾರದು. ಇದು ತೊಂದರೆಗಳಿಗೆ ಕಾರಣವಾಗಬಹುದು. ಗುಣಮುಖರಾದವರಲ್ಲಿ ಮತ್ತೆ ತೀವ್ರ ಕೋವಿಡ್ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು
►ಕೋವಿಡ್-19ರೊಂದಿಗೆ ಗುರುತಿಸಿಕೊಂಡಿರುವ ಸಾಮಾಜಿಕ ಕಳಂಕವನ್ನು ನಿವಾರಿಸಲು ಸಮುದಾಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಗುಣಮುಖರಾದ ರೋಗಿಗಳು ಸ್ವಸಹಾಯ ಗುಂಪುಗಳೊಂದಿಗೆ ಸಂವಾದಗಳಲ್ಲಿ ತೊಡಗಿಕೊಳ್ಳಬೇಕು ಮತ್ತು ಮಿಥ್ಯೆಗಳು ಹಾಗೂ ವದಂತಿಗಳನ್ನು ನಿವಾರಿಸಲು ತಮ್ಮ ಧನಾತ್ಮಕ ಅನುಭವಗಳನ್ನು ಹಂಚಿಕೊಳ್ಳಬೇಕು. ಯೋಗ ಮತ್ತು ಧ್ಯಾನಗಳಂತಹ ಗುಂಪು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು
►ಗುಣಮುಖಗೊಂಡ ರೋಗಿಗಳು ಮಾನಸಿಕ ಬೆಂಬಲಕ್ಕಾಗಿ, ಚೇತರಿಕೆಗಾಗಿ ಮತ್ತು ಪುನರ್ವಸತಿಗಾಗಿ ನೆರವು ಪಡೆದುಕೊಳ್ಳಬೇಕು