ಇನ್ನೆಷ್ಟು ದಿನ ಜನರಿಗೆ ಉದ್ಯೋಗ ನಿರಾಕರಿಸುತ್ತೀರಿ: ರಾಹುಲ್ ಗಾಂಧಿ
Update: 2020-09-17 17:44 GMT
ಹೊಸದಿಲ್ಲಿ, ಸೆ. 17: ನಿರುದ್ಯೋಗ ಹೆಚ್ಚುತ್ತಿರುವ ಕುರಿತು ಕೇಂದ್ರ ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉದ್ಯೋಗ ಘನತೆಯ ಪ್ರತೀಕ. ನೀವು ಇನ್ನೆಷ್ಟು ದಿನ ದೇಶದ ಜನರಿಗೆ ಉದ್ಯೋಗ ನಿರಾಕರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಟ್ವಿಟರ್ನಲ್ಲಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಉದ್ಯೋಗ ಬಯಸಿ 1 ಕೋಟಿಗೂ ಅಧಿಕ ಜನರು ಸರಕಾರಿ ಪೋರ್ಟಲ್ನಲ್ಲಿ ನೋಂದಣಿ ಮಾಡಿದ್ದಾರೆ. ಆದರೆ, ಕೇವಲ 1.77 ಲಕ್ಷ ಜನರಿಗೆ ಮಾತ್ರ ಉದ್ಯೋಗ ಲಭ್ಯವಿರುವುದು ಎಂದು ಪ್ರತಿಪಾದಿಸುವ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಆದುದರಿಂದ ಯುವಜನತೆ ಈ ದಿನವನ್ನು (ಗುರುವಾರ) ರಾಷ್ಟ್ರೀಯ ನಿರುದ್ಯೋಗಿಗಳ ದಿನ ಎಂದು ಕರೆದಿದೆ. ದೇಶದ ಆರ್ಥಿಕತೆ ಹಳಿ ತಪ್ಪಿದೆ. ಕೇಂದ್ರ ಸರಕಾರ ಯುವಕರಿಗೆ ಉದ್ಯೋಗ ಒದಗಿಸಲು ಆದ್ಯತೆ ನೀಡಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.