ಉತ್ತರ ಪ್ರದೇಶ: ದಲಿತ ಯುವತಿಯ ಅತ್ಯಾಚಾರಗೈದು ನಾಲಗೆ ಕತ್ತರಿಸಿದ ದುಷ್ಕರ್ಮಿಗಳು

Update: 2020-09-27 05:39 GMT

ಲಕ್ನೋ, ಸೆ.27: ಪಶ್ಚಿಮ ಉತ್ತರ ಪ್ರದೇಶದ ಹತರಾಸ್ ಎಂಬಲ್ಲಿ 20 ವರ್ಷ ವಯಸ್ಸಿನ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆ ಯುವತಿ ಸರಕಾರಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರೆಲ್ಲರೂ ಮೇಲ್ವರ್ಗಕ್ಕೆ ಸೇರಿದವರೆನ್ನಲಾಗಿದೆ.

ಸಂತ್ರಸ್ತೆ ಯುವತಿಗೆ ಹಲವು ಮುರಿತದ ಗಾಯಗಳಾಗಿದ್ದು, ನಾಲಗೆ ಕತ್ತರಿಸಲಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ವಿವರ ನೀಡಿದ್ದಾರೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಯ ಸುಸಜ್ಜಿತ ಆಸ್ಪತ್ರೆಗೆ ವರ್ಗಾಯಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಆರೋಪಿಗಳನ್ನು ಬಂಧಿಸಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರಂಭದಲ್ಲಿ ಯಾವುದೇ ನೆರವು ನೀಡಲಿಲ್ಲ. ಇಡೀ ಗ್ರಾಮದಲ್ಲಿ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕವಷ್ಟೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನುವುದು ಯುವತಿಯ ಕುಟುಂಬದವರ ಆರೋಪ. ಸೆಪ್ಟಂಬರ್ 14ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

"ತಾಯಿ, ತಂಗಿ ಹಾಗೂ ಅಣ್ಣ ಹುಲ್ಲು ತರಲು ಹೋಗಿದ್ದರು. ಅಣ್ಣ ಹುಲ್ಲಿನ ಹೊರೆ ಹೊತ್ತು ಮನೆಗೆ ಹೋದ ಬಳಿಕವೂ ತಂಗಿ ಹಾಗೂ ತಾಯಿ ಹುಲ್ಲು ಕತ್ತರಿಸುತ್ತಿದ್ದರು. ಬಾಜ್ರಾ ಹುಲ್ಲು ಬೆಳೆದು ನಿಂತಿದ್ದರಿಂದ ತಾಯಿ ಹಾಗೂ ತಂಗಿ ಸ್ವಲ್ಪ ದೂರದಲ್ಲಿದ್ದರು. ನಾಲ್ಕೈದು ಮಂದಿಯ ಗುಂಪು ತಂಗಿಯ ಕತ್ತಿಗೆ ದುಪ್ಪಟ ಬಿಗಿದು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ" ಎಂದು ಸಂತ್ರಸ್ತೆಯ ಸಹೋದರ ವಿವರ ನೀಡಿದ್ದಾರೆ.

"ತಾಯಿ ಹುಡುಕಾಟ ನಡೆಸಿದಾಗ ತಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಆಕೆಯ ಮೇಲೆ ಅತ್ಯಾಚಾರವೂ ನಡೆದಿತ್ತು. ಪೊಲೀಸರು ಆರಂಭದಲ್ಲಿ ಯಾವುದೇ ನೆರವು ನೀಡಲಿಲ್ಲ. ನಾಲ್ಕೈದು ದಿನ ಬಳಕ ಕ್ರಮ ಕೈಗೊಂಡರು" ಎಂದವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News