"ರಾಜಕಾರಣಿಗಳು, ಸುದ್ದಿ ವಾಹಿನಿಗಳು ಮಹಾರಾಷ್ಟ್ರದ ಕ್ಷಮೆ ಕೋರಬೇಕು''
ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಒಂದು ಆತ್ಮಹತ್ಯೆ, ಕೊಲೆ ಪ್ರಕರಣವಲ್ಲ ಎಂದು ಏಮ್ಸ್ ವೈದ್ಯಕೀಯ ವರದಿಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿರುವ ಶಿವಸೇನೆ, ಮುಂಬೈ ಪೊಲೀಸರಿಗೆ ಈ ಪ್ರಕರಣ ಕುರಿತಂತೆ ``ಅವಮಾನ' ಉಂಟು ಮಾಡಿದ ರಾಜಕಾರಣಿಗಳು ಹಾಗೂ ಸುದ್ದಿ ವಾಹಿನಿಗಳು ಮಹಾರಾಷ್ಟ್ರದ ಕ್ಷಮೆ ಕೋರಬೇಕು ಎಂದು ಬರೆದಿದೆ.
``ಅಂಧ ಭಕ್ತರು ಏಮ್ಸ್ ವರದಿಯನ್ನು ತಿರಸ್ಕರಿಸಲಿದ್ದಾರೆಯೇ? ಬಾಯಿಗೆ ಬಂದಂತೆ ಹೇಳುವ ರಾಜಕಾರಣಿಗಳು ಹಾಗೂ ಸುದ್ದಿ ವಾಹಿನಿಗಳು ಮುಂಬೈ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ಅವರಿಗೆ ಕಳಂಕ ತಂದಿದ್ದಾರೆ. ಅವರು ಈಗ ಮಹಾರಾಷ್ಟ್ರದ ಕ್ಷಮೆ ಕೋರಬೇಕು,'' ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ನಟನ ಸಾವಿನ ಪ್ರಕರಣ ಕುರಿತಂತೆ ಸತ್ಯ ಕೊನೆಗೂ ಬಹಿರಂಗಗೊಂಡಿದೆ, ಈ ಪ್ರಕರಣವನ್ನು ಬಳಸಿಕೊಂಡು ಮಹಾರಾಷ್ಟ್ರಕ್ಕೆ ಕಳಂಕ ತರುವ ಯತ್ನ ನಡೆಸುವ ಷಡ್ಯಂತ್ರವಿತ್ತು ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ. ಈ ಷಡ್ಯಂತ್ರದ ಭಾಗವಾಗಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದೂ ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.