ದೇಶದ ಪ್ರಗತಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಮಾಡಲಾಗುತ್ತಿದೆ: ಪ್ರಧಾನಿ ಮೋದಿ

Update: 2020-10-19 17:04 GMT

ಮೈಸೂರು, ಅ.19: ದೇಶದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಖಚಿತ ಪಡಿಸಲು ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸುಧಾರಣೆಯ ಪರಿಧಿಯ ವಿಸ್ತರಣೆ ಮತ್ತು ಸುಧಾರಣಾ ಕ್ರಮಗಳ ವೇಗದ ಹೆಚ್ಚಳವನ್ನು ಕಳೆದ ಆರೇಳು ತಿಂಗಳಿನಿಂದ ನೀವು ಗಮನಿಸಿರಬಹುದು. ಕೃಷಿ, ಅಂತರಿಕ್ಷ, ರಕ್ಷಣೆ, ವೈಮಾನಿಕ ಅಥವಾ ಕಾರ್ಮಿಕ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬದಲಾವಣೆಯಾಗಿದೆ. ದೇಶದ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈ ದಶಕ ಭಾರತದ್ದು ಎಂಬುದನ್ನು ಖಾತರಿಪಡಿಸಲು ಈ ಬದಲಾವಣೆ ಪೂರಕವಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಸೋಮವಾರ ಮೈಸೂರು ವಿವಿಯ ನೂರನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಮೋದಿ, ಯುವಜನತೆ ದೇಶದ ಆಧಾರವಾಗಿದ್ದಾರೆ. ಈ ಆಧಾರವನ್ನು ಸದೃಢಗೊಳಿಸಿದಾಗ ಮಾತ್ರ ಈ ದಶಕ ಭಾರತದ್ದಾಗಲಿದೆ. ಈ ದಶಕ ಯುವಜನತೆಗೆ ಅಗಾಧ ಅವಕಾಶಗಳನ್ನು ಕಲ್ಪಿಸಿದೆ ಎಂದರು. ನಾಡಹಬ್ಬ ದಸರಾದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶುಭಾಷಯ ಕೋರಿದ ಪ್ರಧಾನಿ, ಹೊಸ ಶೈಕ್ಷಣಿಕ ಸಂಕಲ್ಪಕ್ಕೆ ಮೈಸೂರು ವಿವಿ ಪ್ರೇರಣೆಯಾಗಿದೆ. ಪದವಿ ಪಡೆಯುವುದಷ್ಟೇ ಶಿಕ್ಷಣದ ಉದ್ದೇಶವಾಗಿರಬಾರದು, ಪದವಿಯ ಜೊತೆಗೆ ಜ್ಞಾನ ಸಂಪಾದನೆಯೂ ಅತ್ಯಗತ್ಯವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪಿಸಿದ ಅವರು, ‘ಸ್ಕಿಲ್ಲಿಂಗ್, ರಿಸ್ಕಿಲ್ಲಿಂಗ್ ಮತ್ತು ಅಪ್‌ಸ್ಕಿಲ್ಲಿಂಗ್’ (ತರಬೇತಿ, ಮರು ತರಬೇತಿ ಮತ್ತು ಹೆಚ್ಚುವರಿ ತರಬೇತಿ) ಇಂದಿನ ದಿನದ ಅಗತ್ಯವಾಗಿದ್ದು ರಾಷ್ಟ್ರೀಯ ಶಿಕ್ಷಣ ನೀತಿ ಈ ವಿಷಯವನ್ನು ಕೇಂದ್ರೀಕರಿಸಿದೆ . ಭಾರತವನ್ನು ಉನ್ನತ ಶಿಕ್ಷಣದ ಜಾಗತಿಕ ಕೇಂದ್ರವನ್ನಾಗಿಸಲು ಮತ್ತು ನಮ್ಮ ಯುವಜನರನ್ನು ಸ್ಪರ್ಧಾತ್ಮಕರನ್ನಾಗಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ಪ್ರವಾಹದಿಂದ ಬಾಧಿತರಾದ ಜನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಪ್ರಧಾನಿ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಎಲ್ಲಾ ಜನರಿಗೂ ಪರಿಹಾರ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಕ್ರಮಗಳನ್ನು ಕೈಗೊಂಡಿದೆ ಎಂದರು.

ಕರ್ನಾಟಕದ ರಾಜ್ಯಪಾಲ ವಜೂಭಾಯ್ ವಾಲಾ, ಉಪಮುಖ್ಯಮಂತ್ರಿ ಸಿಎನ್ ಅಶ್ವಥನಾರಾಯಣ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News