ಲವ್ ಜಿಹಾದ್ ನಿಲ್ಲಿಸದಿದ್ದರೆ ನಿಮ್ಮ ಅಂತಿಮ ಯಾತ್ರೆ ಆರಂಭವಾಗಲಿದೆ ಎಂದ ಆದಿತ್ಯನಾಥ್ !

Update: 2020-10-31 14:56 GMT

ಹೊಸದಿಲ್ಲಿ: ಕೇವಲ ವಿವಾಹದ ಉದ್ದೇಶದ ಮತಾಂತರ ಅಸ್ವೀಕಾರಾರ್ಹ ಎಂದಿರುವ ಅಲಹಾಬಾದ್ ಹೈಕೋರ್ಟ್ ನ ಆದೇಶವನ್ನು ಉಲ್ಲೇಖಿಸಿರುವ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ , "ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸರಕಾರ  ಕಠಿಣ ಕಾನೂನುಗಳನ್ನು ಜಾರಿಗೆ ತರಲಿದೆ" ಎಂದು ಹೇಳಿದ್ದಾರೆ.

ಉಪಚುನಾವಣೆಯ ಹಿನ್ನೆಲೆಯಲ್ಲಿ ಜೌನ್ ಪುರ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ ಅಲಹಾಬಾದ್ ಹೈಕೋರ್ಟ್ ವಿವಾಹಕ್ಕಾಗಿ ಧಾರ್ಮಿಕ ಮತಾಂತರ ಅಗತ್ಯವಿಲ್ಲ ಎಂದಿದೆ. ಸರಕಾರ ಕೂಡ ಲವ್ ಜಿಹಾದ್ ಗೆ ಕಡಿವಾಣ ಹಾಕಲು ಕೆಲಸ ಮಾಡುತ್ತಿದೆ. ನಾವು ಕಾನೂನೊಂದನ್ನು ಜಾರಿಗೆ ತರಲಿದ್ದೇವೆ. ತಮ್ಮ ಗುರುತನ್ನು ಮರೆಮಾಚಿ ನಮ್ಮ ಸಹೋದರಿಯರ ಬದುಕಿನ ಜೊತೆ ಆಟವಾಡುವವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ, ನೀವು ನಿಮ್ಮ ದಾರಿಯನ್ನು ಬಿಡದಿದ್ದರೆ ನಿಮ್ಮ ‘ರಾಮ್ ನಾಮ್ ಸತ್ಯ’ ಯಾತ್ರೆ (ಅಂತಿಮ ಯಾತ್ರೆಯ ಸಂದರ್ಭ ಹೇಳುವ ವಾಕ್ಯ) ಆರಂಭವಾಗುತ್ತದೆ” ಎಂದಿದ್ದಾರೆ.

“ಎಲ್ಲಾ ರಸ್ತೆಗಳ ಕ್ರಾಸಿಂಗ್ ಗಳಲ್ಲಿ ಲವ್ ಜಿಹಾದ್ ನಲ್ಲಿ ಭಾಗಿಯಾದವರ ಪೋಸ್ಟರ್ ಗಳನ್ನು ಹಾಕಲಾಗುವುದು” ಎಂದು ಆದಿತ್ಯನಾಥ್ ಹೇಳಿದ್ದಾರೆ.

ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ದಿನೇ ದಿನೇ ಹೆಚ್ಚುತ್ತಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವ ಆರೋಪಗಳ ನಡುವೆ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಇಲ್ಲಿನ ಹತ್ರಸ್ ನಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ, ಹತ್ಯೆ ಮತ್ತು ಸಂತ್ರಸ್ತೆಯನ್ನು ಮಧ್ಯ ರಾತ್ರಿ ಪೊಲೀಸರು ಸುಟ್ಟು ಹಾಕಿದ ಘಟನೆ ದೇಶಾದ್ಯಂತ ಆಕ್ರೋಶ ಸೃಷ್ಟಿಸಿತ್ತು.

ಅಲಹಾಬಾದ್ ಹೈಕೋರ್ಟ್ ಹೇಳಿದ್ದೇನು?

ಕೇವಲ ವಿವಾಹದ ಉದ್ದೇಶದಿಂದ ನಡೆಯುವ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಇಂದು ಹೇಳಿದೆ.

ವಿವಾಹವಾದ ಮೂರು ತಿಂಗಳ ನಂತರ ರಕ್ಷಣೆ ಕೋರಿ ದಂಪತಿಯೊಂದು ಸಲ್ಲಿಸಿದ್ದ ಅಪೀಲಿನ ಕುರಿತಂತೆ ಹಸ್ತಕ್ಷೇಪ ನಡೆಸಲು ನಿರಾಕರಿಸಿದ ಹೈಕೋರ್ಟ್ ತನ್ನ ಈ ಹಿಂದಿನ ಆದೇಶವೊಂದನ್ನೂ ಉಲ್ಲೇಖಿಸಿದೆ. ಅಪೀಲು ಸಲ್ಲಿಸಿದ್ದ ಮಹಿಳೆ ಮೂಲತಃ ಮುಸ್ಲಿಂ ಆಗಿದ್ದರೂ  ಹಿಂದು ಯುವಕನೊಂದಿಗೆ ಆಕೆಯ ವಿವಾಹ ನಡೆಯುವುದಕ್ಕಿಂತ ಒಂದು ತಿಂಗಳ ಮುಂಚೆ ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು.

ಬಲವಂತದ ಕ್ರಮಗಳ ಮೂಲಕ ಸಂಬಂಧಿಕರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ನಡೆಸಬಾರದೆಂದು ಕೋರ್ಟ್ ಆದೇಶಿಸಬೇಕೆಂದು ಕೋರಿ ದಂಪತಿ ಸಲ್ಲಿಸಿದ್ದ ಅಪೀಲನ್ನು ನ್ಯಾಯಾಲಯದ ಜಸ್ಟಿಸ್ ಮಹೇಶ್ ಚಂದ್ರ ತ್ರಿಪಾಠಿ ಅವರ ನೇತೃತ್ವದ ಏಕಸದಸ್ಯ ಪೀಠ ತನ್ನ ಸೆಪ್ಟೆಂಬರ್ 23ರ ಆದೇಶದಲ್ಲಿ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News