ಅರ್ನಬ್ ಬಂಧನ ಖಂಡಿಸಿದ ಎಡಿಟರ್ಸ್ ಗಿಲ್ಡ್
ಹೊಸದಿಲ್ಲಿ : ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನವನ್ನು ಖಂಡಿಸಿ ಇಂದು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಬಂಧನದಲ್ಲಿರುವ ವೇಳೆ ಅವರನ್ನು ನ್ಯಾಯಯುತವಾಗಿ ನೋಡಿಕೊಳ್ಳುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಆಗ್ರಹಿಸಿದೆ.
ಮುಂಬೈ ಪೊಲೀಸರು ಗೋಸ್ವಾಮಿಯನ್ನು ಬಂಧಿಸಿರುವುದು ತಿಳಿದು ಆಘಾತವಾಯಿತು ಎಂದಿರುವ ಸಂಸ್ಥೆ ಅವರ ದಿಢೀರ್ ಬಂಧನ ಬಹಳಷ್ಟು ಕಳವಳಕಾರಿ ಎಂದು ಹೇಳಿದೆ.
``ಗೋಸ್ವಾಮಿ ಅವರನ್ನು ನ್ಯಾಯಯುತವಾಗಿ ನೋಡಿಕೊಳ್ಳುವಂತೆ ಹಾಗೂ ಮಾಧ್ಯಮಗಳ ಟೀಕಾತ್ಮಕ ವರದಿಗಳ ವಿರುದ್ಧ ಸರಕಾರದ ಅಧಿಕಾರ ಬಳಕೆಯಾಗದಂತೆ ನೋಡಿಕೊಳ್ಳಬೇಕು,'' ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
ಮುಂಬೈಯ ಗೋಸ್ವಾಮಿ ನಿವಾಸದಿಂದ ಆಲಿಬಾಗ್ ಪೊಲೀಸರ ತಂಡ ಅವರನ್ನು ಬಂಧಿಸಿತ್ತು. ಅರ್ನಬ್ ಅವರನ್ನು ಪೊಲೀಸ್ ವ್ಯಾನ್ನೊಳಗೆ ದೂಡುತ್ತಿರುವುದೂ ಕಾಣಿಸಿದೆ. ತಮ್ಮನ್ನು ಮನೆಯಿಂದ ಬಂಧಿಸುವ ವೇಳೆ ಪೊಲೀಸರು ತಮಗೆ ಹಲ್ಲೆ ನಡೆಸಿದ್ದಾರೆ ಎಂದು ಅರ್ನಬ್ ಹೇಳಿಕೊಂಡಿದ್ದಾರೆ.