ನ.9ರಂದು ಅರ್ನಬ್ ಗೋಸ್ವಾಮಿಯ ಪೊಲೀಸ್ ಕಸ್ಟಡಿ ಕೋರಿದ ಅರ್ಜಿಯ ವಿಚಾರಣೆ: ಸೆಶನ್ಸ್ ಕೋರ್ಟ್
Update: 2020-11-07 12:24 GMT
ಹೊಸದಿಲ್ಲಿ: 2018ರ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಪೊಲೀಸ್ ಕಸ್ಟಡಿಗೆ ಬದಲಾಗಿ ನ್ಯಾಯಾಂಗದ ಕಸ್ಟಡಿಗೆ ಒಪ್ಪಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ ಮರುಪರಿಶೀಲನೆ ಅರ್ಜಿಯ ವಿಚಾರಣೆಯನ್ನು ನವೆಂಬರ್ 9ರಂದು ಕೈಗೆತ್ತಿಕೊಳ್ಳುವುದಾಗಿ ಮಹಾರಾಷ್ಟ್ರದ ಅಲಿಬಾಗ್ ಸೆಶನ್ಸ್ ಕೋರ್ಟ್ ಹೇಳಿದೆ.
ಮಧ್ಯಂತರ ಜಾಮೀನು ಕೋರಿ ಮತ್ತು ತಮ್ಮ ‘ಅಕ್ರಮ ಬಂಧನವನ್ನು’ ಪ್ರಶ್ನಿಸಿ ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಆರೋಪಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸುತ್ತಿದೆ ಎಂದು ಮಾಹಿತಿ ನೀಡಿದ ಬಳಿಕ ಜಿಲ್ಲಾ ಸೆಶನ್ಸ್ ಕೋರ್ಟ್ ಈ ಆದೇಶವನ್ನು ಪ್ರಕಟಿಸಿತು.
ಕೆಳ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಮೂವರು ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಪೊಲೀಸರು ಸೆಶನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.