ನಮ್ಮನ್ನು ಗಡಿಯಲ್ಲಿ ಕೆಣಕಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ: ಯೋಧರ ಜತೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಜೈಸಲ್ಮೇರ್: "ಗಡಿಯಲ್ಲಿ ನಮ್ಮನ್ನು ಕೆಣಕಲು ಯಾರಾದರೂ ಯತ್ನಿಸಿದರೆ, ಅದಕ್ಕೆ ತಕ್ಕ ಪ್ರತ್ಯುತ್ತರ ದೊರಕುತ್ತದೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ನ ಲೋಂಗೆವಾಲ ಎಂಬಲ್ಲಿ ಇಂದು ದೀಪಾವಳಿ ಹಬ್ಬವನ್ನು ಸೈನಿಕರೊಂದಿಗೆ ಆಚರಿಸಲು ಆಗಮಿಸಿರುವ ಪ್ರಧಾನಿ ಮೋದಿ ಜವಾನರನ್ನುದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶುಕ್ರವಾರ ಪಾಕ್ ಸೇನೆಯ ಅಪ್ರಚೋದಿತ ದಾಳಿಗೆ ಐವರು ಜವಾನರು ಸೇರಿದಂತೆ 11 ಮಂದಿ ಬಲಿಯಾದ ಘಟನೆಯ ನಂತರ ಭಾರತದ ಸೇನೆ ನಡೆಸಿದ ಪ್ರತಿ ದಾಳಿಯಲ್ಲಿ 11 ಮಂದಿ ಪಾಕ್ ಸೈನಿಕರು ಹತರಾದ ನಂತರದ ಬೆಳವಣಿಗೆಯಲ್ಲಿ ಪ್ರಧಾನಿಯ ಮೇಲಿನ ಹೇಳಿಕೆ ಬಂದಿದೆ.
"ಭಾರತದ ಉದ್ದನೆಯ ಗಡಿಗಳು ಹಲವು ಇದ್ದರೂ ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿರುವ ಒಂದು ಹೆಸರೆಂದರೆ ಅದು ಲೋಂಗೇವಾಲ್. ಲೋಂಗೇವಾಲ್ ಯುದ್ಧ ನೆನಪಾದಾಗಲೆಲ್ಲಾ 'ಜೋ ಬೋಲೇ ಸೋ ನಿಹಾಲ್, ಸತ್ ಶ್ರೀ ಅಕಾಲ್' ನೆನಪಾಗುತ್ತದೆ ಎಂದು ಪ್ರಧಾನಿ ಹೇಳಿದರು.
"ಮೋದೀ ಜಿ ಏಕೆ ಪ್ರತಿ ವರ್ಷ ದೀಪಾವಳಿಯಂದು ಸೈನಿಕರನ್ನು ಭೇಟಿಯಾಗುತ್ತಾರೆಂದು ಕೆಲವರು ಯೋಚಿಸಬಹುದು. ದೀಪಾವಳಿ ಹಬ್ಬವನ್ನು ನಾವು ನಮ್ಮ ಕುಟುಂಬ ಹಾಗೂ ನಮ್ಮವರೊಂದಿಗೆ ಆಚರಿಸುತ್ತೇವೆ. ಆದುದರಿಂದ ಪ್ರತಿ ವರ್ಷ ನಾನು ನಿಮ್ಮೆಲ್ಲರ ಜತೆ ಆಚರಿಸುತ್ತೇನೆ ಏಕೆಂದರೆ ನಿವೆಲ್ಲಾ ನನ್ನ ಸ್ವಂತ ಕುಟುಂಬ,'' ಎಂದು ಪ್ರಧಾನಿ ಹೇಳಿದರು.
"ಇಂದು ನಾನು ನಿಮಗಾಗಿ ಸಿಹಿ ತಿಂಡಿ ತಂದಿದ್ದೇನೆ. ಈ ಸಿಹಿ ತಿಂಡಿ ಕೇವಲ ನನ್ನಿಂದಲ್ಲ, 130 ಕೋಟಿ ಭಾರತೀಯರಿಂದ,'' ಎಂದು ಅವರು ಹೇಳಿದರು.