ಎಫ್‌ಐಆರ್ ರದ್ಧತಿಗೆ ಬಾಂಬೆ ಹೈಕೋರ್ಟ್‌ಗೆ ಕಂಗನಾ, ಸಹೋದರಿ ರಂಗೋಲಿ ಮನವಿ

Update: 2020-11-23 16:37 GMT

 ಮುಂಬೈ, ನ. 23: ತಮ್ಮ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿಯರಾದ ಕಂಗನಾ ರಾಣಾವತ್ ಹಾಗೂ ಅವರ ಸಹೋದರಿ ರಂಗೋಲಿ ಚಂದೇಲ್ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಕೋಮು ಉದ್ವಿಗ್ನತೆ ಪ್ರಚೋದಿಸುವ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಇಂದು ಮತ್ತು ನಾಳೆ ಮುಂಬೈ ಪೊಲೀಸರ ಮುಂದೆ ಹಾಜರಾಗುವಂತೆ ಕಂಗನಾ ಹಾಗೂ ರಂಗೋಲಿಗೆ ಸೂಚಿಸಲಾಗಿತ್ತು.

ಕಂಗನಾ ಹಾಗೂ ರಂಗೋಲಿ ಅವರಿಗೆ ಅಕ್ಟೋಬರ್ 26 ಹಾಗೂ 27, ನವೆಂಬರ್ 9 ಹಾಗೂ 10ರಂದು ಎರಡು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಪೊಲೀಸರ ಮುಂದೆ ಹಾಜರಾಗಿರಲಿಲ್ಲ. ತಮ್ಮ ವಕೀಲರು ಹಿಮಾಚಲಪ್ರದೇಶದಲ್ಲಿ ನವೆಂಬರ್ 15ರ ವರೆಗೆ ನಡೆಯಲಿರುವ ಸಹೋದರರ ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಅವರು ಹೇಳಿದ್ದರು.

 ಅನಂತರ ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕಂಗನಾ ಹಾಗೂ ರಂಗೋಲಿ ಅವರಿಗೆ ಮೂರನೇ ನೋಟಿಸ್ ಜಾರಿ ಮಾಡಿದ್ದರು.

 ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಕಾಸ್ಟಿಂಗ್ (ಪಾತ್ರಗಳನ್ನು ಆಯ್ಕೆ ಮಾಡುವ ನಿರ್ದೇಶಕ) ನಿರ್ದೇಶಕ ಹಾಗೂ ಫಿಟ್‌ನೆಸ್ ತರಬೇತುದಾರ ಮುನಾವರ್ ಅಲಿ ಸೈಯದ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕಂಗನಾ ಹಾಗೂ ರಂಗೋಲಿ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News