ಅರಿಷಡ್ವರ್ಗ: ನಿರೂಪಣೆಯಲ್ಲೇ ಮನಸೆಳೆವ ಹೊಸ ಮಾರ್ಗ

Update: 2020-11-28 19:30 GMT

ಇಲ್ಲಿರುವ ಯಾರೂ ಪರಿಪೂರ್ಣರಲ್ಲ! ಅಂತಹದೊಂದು ಸಂದರ್ಭವನ್ನು ನಮ್ಮಳಗಿರುವ ಅರಿಷಡ್ವರ್ಗಗಳೇ ಸೃಷ್ಟಿಸುತ್ತವೆ. ಆದರೆ ಮಾಡುವ ತಪ್ಪುಗಳಿಗೆ ಸಂದರ್ಭಗಳು ಶಿಕ್ಷೆ ನೀಡುತ್ತಾ ಹೋಗುತ್ತವೆ. ಇದು ಚಿತ್ರದ ಥಿಯರಿ. ಇದನ್ನು ಸಿನೆಮಾದ ಆರಂಭದಿಂದ ಕೊನೆಯ ಫ್ರೇಮ್ ತನಕ ನಿರ್ದೇಶಕರು ಸಾಬೀತು ಮಾಡುತ್ತಾ ಹೋಗಿದ್ದಾರೆ.

ಯಾರೂ ಪರಿಪೂರ್ಣರಲ್ಲ ಎಂದ ಮೇಲೆ ಇರುವವರಲ್ಲಿ ಯಾರು ಉತ್ತಮ ಎನ್ನುವ ಆಯ್ಕೆಯಷ್ಟೇ ನಮ್ಮದು. ಹಾಗೆ ಯೋಚಿಸುವಾಗ ಒಂದು ಕೊಲೆಯ ಸುತ್ತ ನಡೆಯುವ ಈ ತನಿಖೆಯ ಕತೆಯಲ್ಲಿ ತನಿಖಾಧಿಕಾರಿಯೇ ನಮಗೆ ನಾಯಕನಂತೆ ಗೋಚರಿಸುತ್ತಾರೆ. ಯಾಕೆಂದರೆ ಆತನ ದೃಷ್ಟಿಯಲ್ಲಿರುವ ಚಿತ್ರಣವನ್ನೇ ನಮಗೆ ನೀಡಲಾಗುತ್ತದೆ. ಸಿನೆಮಾದ ಟ್ರೇಲರ್ ನೋಡಿರುವವರಿಗೆ ಇದು ಮಂಜುನಾಥ್ ಭಟ್ ಎನ್ನುವ ನಿರ್ಮಾಪಕನ ಕೊಲೆಯ ಸುತ್ತ ನಡೆದ ತನಿಖೆ ಎಂದು ತಿಳಿದಿರುತ್ತದೆ. ಕೊಲೆಗಾರ ಯಾರು ಎನ್ನುವುದನ್ನು ಚಿತ್ರದ ಕೊನೆಯ ತನಕ ಕುತೂಹಲ ಕಾಯ್ದುಕೊಳ್ಳುವಲ್ಲಿ ಚಿತ್ರಕತೆ ಯಶಸ್ವಿಯಾಗಿದೆ. ಕೊಲೆಯಾದ ದಿನ ಆ ಮನೆಗೆ ನುಗ್ಗಿದ್ದ ಕಳ್ಳ, ಆಡಿಶನ್‌ಗೆ ಬಂದಿದ್ದ ಯುವತಿ, ಫೋನ್ ಕರೆಗೆ ಸ್ಪಂದಿಸಿ ಬಂದಿದ್ದ ಯುವಕ ಸೇರಿದಂತೆ ಮಂಜುನಾಥ್ ಭಟ್ ಪತ್ನಿಯ ಮೇಲೆಯೂ ತನಿಖೆ ನಡೆಯುತ್ತದೆ. ಈ ಸಂದರ್ಭದಲ್ಲಿ ಹೊರಬೀಳುವ ವಿಚಾರಗಳನ್ನು ರೋಚಕವಾಗಿ ನೀಡಿರುವ ಚಿತ್ರವೇ ಅರಿಷಡ್ವರ್ಗ.

ತನಿಖಾಧಿಕಾರಿಯ ಪಾತ್ರದಲ್ಲಿ ನಟಿಸಿರುವ ನಂದಗೋಪಾಲ್ ಚಿತ್ರದ ಕೇಂದ್ರ ಬಿಂದು. ಅವರು ಸಹಜಾಭಿನಯದಿಂದ ಹೆಸರಾಗುತ್ತಿರುವ ರಂಗಭೂಮಿ ಪ್ರತಿಭೆ. ಇಂತಹದೊಂದು ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿಯೂ ಭಾವನೆಗಳಿಗೆ ಬಣ್ಣವಾಗಿ ನಟಿಸಿ ಗಮನ ಸೆಳೆಯುವವರು ಅಂಜು ಆಳ್ವಾ. ಮೃತ ಮಂಜುನಾಥ ಭಟ್ ಪತ್ನಿಯಾಗಿ ಅವರ ಅಭಿನಯ ಅಮೋಘ. ನೋಟ, ನಟನೆಯಲ್ಲಿ ವಿನಯಾ ಪ್ರಸಾದ್ ಮತ್ತು ಸುಮನ್ ರಂಗನಾಥ್ ಇಬ್ಬರನ್ನೂ ಮೇಳೈಸಿದಂತಹ ನಟಿ. ವಿರಹ, ಕಾಮಕ್ಕಿಂತ ಹೆಚ್ಚಾಗಿ ಅವರದು ಕನ್ವಿನ್ಸ್ ಮಾಡುವಂತಹ ಹತಾಶೆ, ಕಣ್ಣೀರಿನ ನಟನೆ. ಅದನ್ನು ನೈಜವಾಗಿ ತೆಗೆಸಿರುವ ನಿರ್ದೇಶಕರು ಅಭಿನಂದನಾರ್ಹರು.

ನಿರ್ಮಾಪಕ ಮಂಜುನಾಥ್ ಭಟ್ ಎನ್ನುವುದು ಅವಿನಾಶ್ ಅವರಿಗೆ ಸಿಕ್ಕ ಅಪರೂಪದ ಪಾತ್ರವೇ ನಿಜ. ಕೊಲೆಯಾಗುವ ದೃಶ್ಯದಲ್ಲಂತೂ ಅವರ ನಟನೆ ಅವಿಸ್ಮರಣೀಯ. ಮನೆಕಳ್ಳನಾಗಿ ಸಿಕ್ಕಿಬೀಳುವ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಮನಗೆಲ್ಲುತ್ತಾರೆ. ನಿರ್ಮಾಪಕರ ಮನೆಗೆ ಆಡಿಶನ್‌ಗೆ ಬರುವ ಯುವತಿ ‘ಸಾಕ್ಷಿ’ಯಾಗಿ ಸಂಯುಕ್ತಾ ಹೊರನಾಡು ಮುಖದಲ್ಲಿ ನಟನಾಕಾಂಕ್ಷಿಯ ಕಳೆ. ಮಹಿಳೆಯ ಕರೆ ಕೇಳಿ ಸ್ಪಂದಿಸಲೆಂದು ಬಂದ ಅನೀಶ್ ಎಂಬ ವಿಟನಾಗಿ ಮುಗ್ಧ ಮುಖ, ಮೈಮಾಟ ತೋರಿದ್ದಾರೆ ಮಹೇಶ್ ಎನ್ನುವ ನವನಟ. ಹಿರಿಯ ಪಿ.ಸಿ.ಯಾಗಿ ಶ್ರೀಪತಿ ಮಂಜನಬೈಲು ಪೋಷಕ ಪಾತ್ರಗಳಲ್ಲೊಂದು ಮೈಲುಗಲ್ಲು. ದ್ವಿತೀಯಾರ್ಧದಲ್ಲಿ ಎಂಟ್ರಿಯಾಗುವ ಯುವ ನಿರ್ದೇಶಕ ಕಾರ್ತಿಕನಾಗಿ ಅರವಿಂದ್ ಕುಪ್ಲೀಕರ್ ಕತೆಯ ಗೇಮ್ ಚೇಂಜರ್. ಒಟ್ಟಿನಲ್ಲಿ ಕೊನೆಯ ದೃಶ್ಯದ ತನಕ ಕತೆಯೇ ಮುಖ್ಯ ಘಟಕ.

ಥ್ರಿಲ್ಲಿಂಗ್ ಸಂದರ್ಭಗಳು ಹೆಚ್ಚಿದಷ್ಟು ಪ್ರೇಕ್ಷಕರಿಗೆ ಕುತೂಹಲವೂ ಹೆಚ್ಚು. ಹಾಗಾಗಿಯೇ ಎರಡು ಗಂಟೆ ಹತ್ತು ನಿಮಿಷದ ಕಾಲಾವಧಿ ಕೂಡ ಹೆಚ್ಚಾಯಿತೇನೋ ಎಂದೊಮ್ಮೆ ಅನಿಸಬಹುದು. ಆದರೆ ಚಿತ್ರಕತೆ ಕಟ್ಟಿರುವ ರೀತಿ ಪ್ರೇಕ್ಷಕರನ್ನು ಮೈಮರೆಸಿ ಚಿತ್ರ ನೋಡುವಂತೆ ಮಾಡುತ್ತದೆ. ಮಾತ್ರವಲ್ಲ, ಹಿನ್ನೆಲೆ ಸಂಗೀತ, ಸಂಕಲನ, ಪ್ರತಿಯೊಂದು ಪಾತ್ರಗಳ ಇಂಟ್ರಡಕ್ಷನ್ ಮಾಡಿರುವ ಶೈಲಿ ಎಲ್ಲವೂ ಆಕರ್ಷಕ. ನಟ ಬಾಲಾಜಿ ಮನೋಹರ್ ಅವರು ಮೊದಲ ಬಾರಿ ಛಾಯಾಗ್ರಾಹಕರಾಗಿದ್ದು, ತಾನೋರ್ವ ಬಹುಮುಖ ಪ್ರತಿಭೆ ಎಂದು ಸಾಬೀತು ಮಾಡಿದ್ದಾರೆ. ಉದಿತ್ ಹರಿದಾಸ್ ಸಂಗೀತದಲ್ಲಿ ಹಾಡುಗಳು ಗಜಲ್‌ಗಳಂತೆ, ಪವನ್ ಕುಮಾರ್ ಸಾಹಿತ್ಯ ಭಾವಗೀತೆಯಂತೆ ಆಪ್ತವಾಗುತ್ತದೆ. ರಘು ದೀಕ್ಷಿತ್ ಕಂಠದಲ್ಲಿರುವ ‘ಗಡಿಯಾರಕೆ ಮುಪ್ಪಿರದೇ’ ಹಾಡು ಕೇಳುತ್ತಾ ಅಪ್ಯಾಯಮಾನವೆನಿಸುತ್ತದೆ. ಒಟ್ಟಿನಲ್ಲಿ ಅರಿಷಡ್ವರ್ಗ ಕನ್ನಡ ಸಿನೆಮಾ ಪ್ರೇಕ್ಷಕರಲ್ಲಿ ಹೊಸ ವರ್ಗವನ್ನೇ ಸೃಷ್ಟಿಸುವ ಶಕ್ತಿ ಹೊಂದಿದೆ.

ತಾರಾಗಣ: ಅವಿನಾಶ್, ಸಂಯುಕ್ತಾ ಹೊರನಾಡು
ನಿರ್ದೇಶನ: ಅರವಿಂದ್ ಕಾಮತ್
ನಿರ್ಮಾಣ: ಕನಸು ಟಾಕೀಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News