ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿದೆ: ಪುನರುಚ್ಚರಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್)ಯೋಜನೆ ಅಡಿ 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿರುವ 18,000 ಕೋ.ರೂ.ವನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಪ್ರಧಾನಿ ಮೋದಿ ಆನ್ಲೈನ್ ಮೂಲಕ ಆಯ್ದ 6 ರಾಜ್ಯಗಳ ರೈತರೊಂದಿಗೆ ಸಂವಾದವನ್ನು ನಡೆಸಿದರು.
ಕೆಲವು ಪಕ್ಷಗಳು ನೂತನ ಕೃಷಿ ಕಾನೂನುಗಳನ್ನು ವಿರೋಧಿಸುವ ಮೂಲಕ ರಾಜಕೀಯ ಕಾರ್ಯಸೂಚಿಯನ್ನು ಮುಂದಿಡುತ್ತಿವೆ. ರೈತರು ಗುತ್ತಿಗೆ ಕೃಷಿ ಪ್ರವೇಶಿಸಿದರೆ ಭೂಮಿಯನ್ನು ಕಸಿದುಕೊಳ್ಳಲಾಗುವುದು ಎಂಬ ಸುಳ್ಳನ್ನು ಕೆಲವರು ಹರಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾಗಿರುವ ಇಂದು ಪ್ರಧಾನಿ ಮೋದಿ ಪ್ರತಿ ರೈತರಿಗೆ 2,000 ರೂ.ಕಂತನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪಾಲ್ಗೊಂಡಿದ್ದರು.
ಕಿಶನ್ಘರ್ನಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಎಂಎಸ್ಪಿ ಮುಂದುವರಿಯಲಿದೆ. ಮಂಡಿಗಳು ಮುಚ್ಚಲಾಗುವುದಿಲ್ಲ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ರೈತರ ಜಮೀನನ್ನು ಸೆಳೆಯುವುದಿಲ್ಲ ಎಂದು ಹೇಳಿದರಲ್ಲದೆ ವಿಪಕ್ಷಗಳು ಸುಳ್ಳು ಹರಡುತ್ತಿವೆ ಎಂದು ಆರೋಪಿಸಿದರು.
ಅತ್ತ ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ, ಸರಕಾರಕ್ಕೆ ಪ್ರತಿಭಟನಾನಿರತ ರೈತರ ಬಗ್ಗೆ ಗೌರವವಿದೆ ಹಾಗೂ ಅವರ ಹಿತಾಸಕ್ತಿಗೆ ವಿರುದ್ಧವಾದುದನ್ನು ಅದು ಕೈಗೆತ್ತಿಕೊಳ್ಳುವುದಿಲ್ಲ ಎಂದರು. "ಕೃಷಿ ಕಾನೂನುಗಳು ಒಂದು ವರ್ಷದ ತನಕ ಜಾರಿಯಾಗಲಿ. ರೈತರಿಗೆ ಲಾಭವಿಲ್ಲವೆಂದಾದರೆ ನಾವು ಸೂಕ್ತ ತಿದ್ದುಪಡಿಗಳನ್ನು ಮಾಡುತ್ತೇವೆ," ಎಂದು ಅವರು ಹೇಳಿದರು.
"ಇಂದು ಪ್ರತಿಯೊಬ್ಬ ರೈತನು ತನ್ನ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿದೆ ಎನ್ನುವುದನ್ನು ತಿಳಿದುಕೊಂಡಿದ್ದಾನೆ. ಈ ಕೃಷಿ ಸುಧಾರಣೆಯಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತರಿಗೆ ಅನುಕೂಲವಾಗುತ್ತಿದ್ದರೆ ತಪ್ಪೇನಿದೆ?. ಹಿಂದಿನ ಸರಕಾರಗಳು ರೈತರ ಹಿತಕ್ಕಾಗಿ ಯಾವುದೇ ಯೋಜನೆಗಳನ್ನು ಮಾಡಿಲ್ಲ. ಈಗ ಹೆಡ್ಲೈನ್ಗಾಗಿ ನಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಖಾತೆಗೆ ದಾಖಲೆ ಮೊತ್ತದ ಹಣ ತಲುಪುತ್ತಿದೆ. ಪ್ರತಿಭಟನೆ ನಡೆಸುವ ಅಷ್ಟು ಮಂದಿ ಇದೇ ಸರಕಾರದ ಭಾಗವಾಗಿದ್ದಾರೆ.ಇಷ್ಟು ವರ್ಷ ಅವರಿಂದ ಏನು ಮಾಡಲು ಸಾಧ್ಯವಾಗಲಿಲ್ಲ'' ಎಂದು ಮೋದಿ ಹೇಳಿದ್ದಾರೆ.