ಕೋಮುವಾದವನ್ನು ತಿರಸ್ಕರಿಸದೇ ಇದ್ದರೆ...: ಬಂಗಾಳದ ಜನರಿಗೆ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದೇನು?
ಕೊಲ್ಕತ್ತಾ: "ಪಶ್ಚಿಮ ಬಂಗಾಳದ ಜನರು ಕೋಮುವಾದವನ್ನು ತಿರಸ್ಕರಿಸದೇ ಇದ್ದಲ್ಲಿ ಅವರು ಠಾಗೋರ್ ಹಾಗೂ ನೇತಾಜಿ ಅವರ ಯೋಗ್ಯ ಉತ್ತರಾಧಿಕಾರಿಗಳೆಂದು ಎಣಿಸಿಕೊಳ್ಳಲು ಅರ್ಹರಲ್ಲ,'' ಎಂದು ಖ್ಯಾತ ಅರ್ಥಶಾಸ್ತ್ರಜ್ಞ , ನೋಬಲ್ ಪ್ರಶಸ್ತಿ ವಿಜೇತ ಪ್ರೊ. ಅಮರ್ತ್ಯ ಸೇನ್ ಹೇಳಿದ್ದಾರೆ.
"ರಾಜ್ಯದಲ್ಲಿ ಕೋಮುವಾದ ಮತ್ತೆ ತಲೆಯೆತ್ತದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತ ಟಿಎಂಸಿಗಿರುವಷ್ಟೇ ಎಡ ಮತ್ತು ಇತರ ಜಾತ್ಯತೀತ ಪಕ್ಷಗಳಿಗಿವೆ,'' ಎಂದು ಅವರು ಹೇಳಿದ್ದಾರೆ.
"ಪಶ್ಚಿಮ ಬಂಗಾಳ ಹಿಂದೆ ಕೋಮುವಾದದಿಂದ ಬಹಳಷ್ಟು ಕಷ್ಟ ಅನುಭವಿಸಿದೆ. ಪ್ರತಿಯೊಂದು ಪಕ್ಷಕ್ಕೆ ತಮ್ಮ ಗುರಿ ಸಾಧಿಸುವ ಜತೆಗೆ ಬಂಗಾಳವನ್ನು ಜಾತ್ಯತೀತವಾಗಿರಿಸುವ ಹಾಗೂ ಕೋಮುವಾದದಿಂದ ಮುಕ್ತವಾಗಿಸುವ ಉದ್ದೇಶವಿರಬೇಕು,'' ಎಂದು ಅವರು ಹೇಳಿದರು.
"ರವೀಂದ್ರನಾಥ್ ಠಾಗೋರ್, ನೇತಾಜಿ ಸುಭಾಸ್ ಚಂದ್ರ ಬೋಸ್, ಈಶ್ವರ ಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ ಎಲ್ಲರೂ ಏಕತೆಯ ಬಂಗಾಳಿ ಸಂಸ್ಕೃತಿ ಪರ ಇದ್ದರು ಹಾಗೂ ಒಂದು ಸಮುದಾಯವನ್ನು ಇನ್ನೊಂದರ ವಿರುದ್ಧ ಎತ್ತಿ ಕಟ್ಟಲು ಆಸ್ಪದವೇ ಅಲ್ಲಿಲ್ಲ,'' ಎಂದು ಸೇನ್ ಹೇಳಿದರು.