ಪ್ರೀತಿಸಿದ್ದಕ್ಕೆ ಉಗುಳಿ ಅದನ್ನು ನೆಕ್ಕುವ ಶಿಕ್ಷೆ ನೀಡಿದ ಆರೋಪ: ಆತ್ಮಹತ್ಯೆಗೈದ ಯುವಕ

Update: 2020-12-29 13:08 GMT

ಪಾಟ್ನಾ: ಯುವತಿಯೊಬ್ಬಳೊಂದಿಗೆ ಪ್ರೇಮ ವ್ಯವಹಾರ ಹೊಂದಿದ್ದ ತಪ್ಪಿಗೆ ನೆಲಕ್ಕೆ ಉಗುಳಿ ಅದನ್ನು ನೆಕ್ಕುವಂತೆ ಸ್ವಘೋಷಿತ ಪಂಚಾಯತ್‍ನಿಂದ ಶಿಕ್ಷೆ ಪಡೆದು ಅವಮಾನಿತನಾದ 22 ವರ್ಷದ ಯುವಕನೊಬ್ಬ ಬಿಹಾರದ ಕೈಮೂರ್ ಜಿಲ್ಲೆಯ ಚೈನ್ಪುರ್ ಎಂಬ ಗ್ರಾಮದ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ಈ ಸಂಬಂಧ ಯುವಕನ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಐದು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಎಂದು timesofindia ವರದಿ ಮಾಡಿದೆ.

ಯುವಕ ಶಿವ ಶಂಕರ್ ಗುಪ್ತಾ ತಾನು ಪ್ರೀತಿಸುತ್ತಿದ್ದ ಯುವತಿಯ ಮನೆಯಲ್ಲಿರುವಾಗ ಆಕೆಯ ಕುಟುಂಬ ಸದಸ್ಯರ ಕೈಗೆ ಸಿಕ್ಕಿ ಬಿದ್ದಿದ್ದ. ಈ ಸಂದರ್ಭ ಆತನಿಗೆ ಥಳಿಸಲಾಗಿತ್ತಲ್ಲದೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನೂ ಆತನ ಮೇಲೆ ಹೊರಿಸಲಾಗಿತ್ತು ಎನ್ನಲಾಗಿದೆ.

ಮಾಹಿತಿ ದೊರಕಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದರಲ್ಲದೆ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಎರಡೂ ಕುಟುಂಬಗಳಿಗೆ ಸೂಚಿಸಿದ್ದರು.

ಆದರೆ ಡಿಸೆಂಬರ್ 26ರಂದು ಯುವತಿಯ ಕುಟುಂಬ ಹಾಗೂ ಗ್ರಾಮದ ಕೆಲವರು ಒಂದೆಡೆ ಸೇರಿ ಅಲ್ಲಿ ಯುವಕನಿಗೆ ನೆಲಕ್ಕೆ ಉಗುಳಿ ಅದನ್ನು ನೆಕ್ಕುವ ಶಿಕ್ಷೆ ವಿಧಿಸಿದ್ದರು. ಉಪಾಯವಿಲ್ಲದೆ ಅಂತೆಯೇ ಮಾಡಿದ್ದ ಯುವಕ ತೀವ್ರ ಅವಮಾನದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News