×
Ad

ಕಾಂಗ್ರೆಸ್‌ ನ ಹಿರಿಯ ನಾಯಕಿಯ ವಿರುದ್ಧ ಅಸಭ್ಯ ಭಾಷೆ ಬಳಸಿದ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ವ್ಯಾಪಕ ಆಕ್ರೋಶ

Update: 2021-01-06 12:57 IST

ಡೆಹ್ರಾಡೂನ್,ಜ.6: ಉತ್ತರಾಖಂಡ ಬಿಜೆಪಿಯ ಅಧ್ಯಕ್ಷ ಬನ್ಸಿಧರ ಭಗತ್ ಅವರು ಹಿರಿಯ ಕಾಂಗ್ರೆಸ್ ನಾಯಕಿ ಇಂದಿರಾ ಹೃದಯೇಶ್ ಅವರನ್ನು ‘ಮುದುಕಿ ’ಎಂದು ಸಂಬೋಧಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಹೃದಯೇಶ್ ರಾಜ್ಯ ಪ್ರತಿಪಕ್ಷ ನಾಯಕಿಯೂ ಆಗಿದ್ದಾರೆ.

ಹಲವಾರು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಸೇರಲು ಬಯಸಿದ್ದಾರೆ ಮತ್ತು ತನ್ನ ಸಂಪರ್ಕದಲ್ಲಿದ್ದಾರೆ ಎಂದು ಹೃದಯೇಶ್ ಈ ಮೊದಲು ಹೇಳಿದ್ದರು.

ಮಂಗಳವಾರ ನೈನಿತಾಲದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಹೃದಯೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಭಗತ್, ಅರೆ ಮುದುಕಿ,ನಿಮ್ಮನ್ನು ಯಾರು ಸಂಪರ್ಕಿಸುತ್ತಾರೆ? ಯಾರಾದರೂ ಮುಳುಗುತ್ತಿರುವ ಹಡಗಿನ ಸಹವಾಸವನ್ನು ಬಯಸುತ್ತಾರೆಯೇ ಎಂದು ಪ್ರಶ್ನಿಸಿದ್ದರು.

ಭಗತ್ ಬಳಸಿರುವ ಭಾಷೆ ತನಗೆ ನೋವನ್ನುಂಟು ಮಾಡಿದೆ ಎಂದು ಟ್ವಿಟರ್‌ನಲ್ಲಿ ವೀಡಿಯೊ ಸಂದೇಶದಲ್ಲಿ ತಿಳಿಸಿರುವ ಹೃದಯೇಶ್,ಬಿಜೆಪಿಯ ರಾಜ್ಯಾಧ್ಯಕ್ಷರು ಮಹಿಳೆಯರ ಶಕ್ತಿಯನ್ನು ಅವಮಾನಿಸಿದ್ದಾರೆ. ಈ ದೇಶದ ಮಹಿಳೆಯರು ಇದನ್ನೆಂದೂ ಸಹಿಸುವುದಿಲ್ಲ. ಭಗತ್ ಹೇಳಿಕೆಯು ಅವರ ಸಂಕುಚಿತ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ. ಇಂತಹ ಅಸಭ್ಯ ಭಾಷೆ ರಾಜಕೀಯದಲ್ಲಿ ಸೂಕ್ತವಲ್ಲ. ಉತ್ತರಾಖಂಡದ ಮಹಿಳೆಯರು ಸಮಯ ಬಂದಾಗ ಈ ಅವಮಾನಕ್ಕಾಗಿ ನಿಮಗೆ (ಭಗತ್) ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ. ‘ಬೇಟಿ ಬಚಾವೋ ಬೇಟಿ ಪಢಾವೊ’ ಘೋಷಣೆಯನ್ನು ಕೂಗುವ ನಾಯಕರು ತಮ್ಮ ಭಾಷೆಯ ಬಗ್ಗೆ ಜಾಗರೂಕತೆ ವಹಿಸಬೇಕು ಎಂದೂ ಅವರು ಹೇಳಿದ್ದಾರೆ.

ತನ್ನ ಹೇಳಿಕೆಗಾಗಿ ಭಗತ್ ಕ್ಷಮೆ ಯಾಚಿಸಬೇಕು ಎಂದು ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಪ್ರೀತಮ್ ಸಿಂಗ್ ಆಗ್ರಹಿಸಿದ್ದಾರೆ.

 ಕ್ಷಮೆ ಯಾಚಿಸಿದ ಮುಖ್ಯಮಂತ್ರಿ

ಭಗತ್ ಹೇಳಿಕೆಗಾಗಿ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರಸಿಂಗ್ ರಾವತ್ ಅವರು ಬುಧವಾರ ಟ್ವಿಟರ್‌ನಲ್ಲಿ ಹೃದಯೇಶರ ಕ್ಷಮೆ ಯಾಚಿಸಿದ್ದಾರೆ.

‘ಇಂದಿರಾ ಹೃದಯೇಶ್‌ಜಿ,ನನಗೆ ಇಂದು ತುಂಬ ನೋವಾಗಿದೆ. ನಮ್ಮ ಪಾಲಿಗೆ ಮಹಿಳೆಯರು ಅತ್ಯಂತ ಗೌರವಾನ್ವಿತರಾಗಿದ್ದಾರೆ. ನಾನು ವೈಯಕ್ತಿಕವಾಗಿ ನಿಮ್ಮ ಮತ್ತು ನನ್ನಂತೆ ನೋವು ಅನುಭವಿಸಿರುವ ಇತರರ ಕ್ಷಮೆಯನ್ನು ಯಾಚಿಸುತ್ತೇನೆ. ನಿಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಇನ್ನೊಮ್ಮೆ ಕ್ಷಮೆ ಯಾಚಿಸುತ್ತೇನೆ ’ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News