ಎಲ್ಲೆಡೆ ಹಕ್ಕಿ ಜ್ವರ ಭೀತಿ: ಮಾಂಸ, ಮೊಟ್ಟೆ ತಿನ್ನುವವರಿಗೆ ಕೇಂದ್ರ ಸಚಿವರ ಸಲಹೆಯೇನು ಗೊತ್ತೇ?
ಹೊಸದಿಲ್ಲಿ,ಜ.06: ದೇಶದ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢ ಪಟ್ಟಿರುವುದರಿಂದ ಹಾಗೂ ಸಾವಿರಾರು ಹಕ್ಕಿಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ಮಾತುಗಳನ್ನಾಡಿರುವ ಕೇಂದ್ರ ಪಶುಸಂಗೋಪನಾ, ಮೀನುಗಾರಿಕಾ ಮತ್ತು ಹೈನುಗರಿಕೆ ಸಚಿವ ಗಿರಿರಾಜ್ ಸಿಂಗ್, ಮೊಟ್ಟೆ ಹಾಗೂ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ ಎಂಬ ಸಲಹೆಯನ್ನು ನೀಡಿದ್ದಾರೆ.
"ಕೆಲವು ರಾಜ್ಯಗಳಲ್ಲಿ ವಲಸೆ ಹಕ್ಕಿಗಳು ಹಕ್ಕಿ ಜ್ವರ ಅಥವಾ ಏವಿಯನ್ ಫ್ಲೂದಿಂದ ಸಾವಿಗೀಡಾಗುತ್ತಿರುವ ವರದಿಗಳು ಬರುತ್ತಿವೆ. ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಆದರೆ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಿ," ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಕೇರಳ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ಬಾಧಿಸಿರುವ 12 ಸ್ಥಳಗಳನ್ನು ಗುರುತಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಲು ರಾಜಧಾನಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲು ಕೇಂದ್ರ ಸರಕಾರ ಸೂಚಿಸಿದೆ.
ಕೋಳಿ ಫಾರ್ಮ್ಗಳು ಸುತ್ತ ಹೆಚ್ಚು ಸುರಕ್ಷತೆ, ಪೀಡಿತ ಪ್ರದೇಶಗಳ ಸ್ವಚ್ಛತೆ, ಸತ್ತ ಹಕ್ಕಿಗಳ ಕಳೇಬರಗಳನ್ನು ಸೂಕ್ತ ವಿಲೇವಾರಿ ಮುಂತಾದ ವಿಚಾರಗಳಲ್ಲೂ ಕೇಂದ್ರ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದೆ.