ಪದೇ ಪದೇ ನನಗೆ ನೋವುಂಟು ಮಾಡಬೇಡಿ: ಅಭಿಮಾನಿಗಳಿಗೆ ರಜಿನೀಕಾಂತ್ ಮನವಿ

Update: 2021-01-11 18:48 GMT

ಹೊಸದಿಲ್ಲಿ, ಜ. 12: ರಾಜಕೀಯ ಪ್ರವೇಶಿಸುವಂತೆ ಅಭಿಮಾನಿಗಳ ಆಗ್ರಹದ ನಡುವೆ ನಟ ರಜನಿಕಾಂತ್ ಸೋಮವಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಲು ಮನವಿ ಮಾಡದಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

ದೊಡ್ಡ ಸಂಖ್ಯೆಯ ಅಭಿಮಾನಿಗಳು ರವಿವಾರ ಚೆನ್ನೈಯಲ್ಲಿ ಸೇರಿ ರಾಜಕೀಯ ಪ್ರವೇಶಿಸುವಂತೆ ಆಗ್ರಹಿಸಿದ ಬಳಿಕ ರಜನಿಕಾಂತ್ ಅವರು ಈ ಹೇಳಿಕೆ ನೀಡಿದ್ದಾರೆ. ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯಲ್ಲಿ ರಜನಿಕಾಂತ್, ರಾಜಕೀಯ ಪ್ರವೇಶಿಸುವಂತೆ ಕೋರಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಬೇಡಿ ಹಾಗೂ ಇದು ನನಗೆ ನೋವುಂಟು ಮಾಡುತ್ತದೆ ಎಂದು ಅಭಿಮಾನಿಗಳಲ್ಲಿ ಹೇಳಿದ್ದಾರೆ.

‘‘ನಾನು ರಾಜಕೀಯ ಪ್ರವೇಶಿಸದಿರುವ ಬಗೆಗಿನ ನಿರ್ಧಾರದ ಬಗ್ಗೆ ರಜನಿ ಮಕ್ಕಳ್ ಮಂಡ್ರಮ್‌ನ ಉಚ್ಛಾಟಿತ ಸದಸ್ಯರೊಂದಿಗೆ ನನ್ನ ಕೆಲವು ಅಭಿಮಾನಿಗಳು ಧರಣಿ ನಡೆಸಿದ್ದಾರೆ. ನಾನು ನನ್ನ ನಿರ್ಧಾರ ತೆಗೆದುಕೊಂಡಿದ್ದೇನೆ. ಇಂತಹ ಪ್ರತಿಭಟನೆಗಳು ನನಗೆ ನೋವುಂಟು ಮಾಡುವುದರಿಂದ ಇದರಲ್ಲಿ ತೊಡಗಿಕೊಳ್ಳದಂತೆ ನಾನು ಪ್ರತಿಯೊಬ್ಬರಲ್ಲಿ ಮನವಿ ಮಾಡುತ್ತೇನೆ’’ ಎಂದು ರಜನಿಕಾಂತ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಕ್ತದೊತ್ತಡದ ಏರುಪೇರಿನ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾದ ಬಳಿಕ ಡಿಸೆಂಬರ್ 29ರಂದು ರಜನಿಕಾಂತ್ ಆರೋಗ್ಯ ಸ್ಥಿತಿಯ ಕಾರಣಕ್ಕೆ ತಾನು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News