ತ್ರಿಪುರಾ: ವ್ಯಕ್ತಿಯಿಂದ ಪತ್ನಿ, ಅತ್ತೆಯ ಹತ್ಯೆ, ಮಕ್ಕಳ ಎದುರಲ್ಲೇ ಮೃತದೇಹವನ್ನು ಕತ್ತರಿಸಿದ ದುಷ್ಕರ್ಮಿ

Update: 2021-01-12 17:50 GMT

ಗುವಾಹತಿ, ಜ. 12: ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದು, ಅಳುತ್ತಿರುವ ಮಕ್ಕಳ ಎದುರಲ್ಲೇ ಅವರ ಮೃತದೇಹಗಳನ್ನು ಕತ್ತರಿಸಿದ ಭೀಬತ್ಸ ಘಟನೆ ತ್ರಿಪುರಾದಲ್ಲಿ ನಡೆದಿದೆ. ಘಟನೆಯ ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಇಬ್ಬರು ಮಹಿಳೆಯರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಹಾಗೂ ಮಕ್ಕಳು ಆಘಾತಗೊಂಡು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿದಾಗ ಇಬ್ಬರು ಸಾವನ್ನಪ್ಪಿರುವುದು ಹಾಗೂ ಹತ್ಯೆಗೈದ ವ್ಯಕ್ತಿ ವಿಷ ಸೇವಿಸಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಇನ್ನೊಂದು ಕೊಠಡಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದೇವೆ. ಆತನ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗದೇ ಇರುವುದರಿಂದ ಕೃತ್ಯದ ಹಿಂದಿನ ಉದ್ದೇಶ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ’’ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅನೀಶ್ ದಾಸ್‌ಗುಪ್ತಾ ಹೇಳಿದ್ದಾರೆ. ಆರೋಪಿಯ ಪತ್ನಿ ಇಬ್ಬರು ಮಕ್ಕಳೊಂದಿಗೆ ಕಳೆದ ನಾಲ್ಕು ತಿಂಗಳಿಂದ ತವರು ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿ ಹಾಗೂ ಆತನ ಪತ್ನಿ ವಿಚ್ಛೇದನ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಇದ್ದಾರೆ. ವೈವಾಹಿಕ ಜೀವನದ ಮನಸ್ತಾಪವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News