ದೇವಾಲಯ ದಾಳಿ ಘಟನೆಗಳಲ್ಲಿ ಟಿಡಿಪಿ, ಬಿಜೆಪಿ ಕಾರ್ಯಕರ್ತರ ಕೈವಾಡವಿದೆ: ಆಂಧ್ರ ಡಿಜಿಪಿ ಹೇಳಿಕೆ

Update: 2021-01-16 14:39 GMT

ಹೊಸದಿಲ್ಲಿ,ಜ. 15: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ದೇಗುಲಗಳ ಮೇಲೆ ನಡೆದ ಸರಣಿ ದಾಳಿಗಳ ಹಿಂದೆ ತೆಲುಗುದೇಶಂ ಹಾಗೂ ಬಿಜೆಪಿ ಕಾರ್ಯಕರ್ತರ ಕೈವಾಡವಿದೆಯೆಂದು ಆ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌತಮ್ ಸವಾಂಗ್ ಆಪಾದಿಸಿದ್ದಾರೆ.

ಅಮರಾವತಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಗುಲಗಳ ಮೇಲಿನ ದಾಳಿಯ 9 ಪ್ರಕರಣಗಳಲ್ಲಿ ಟಿಡಿಪಿ ಹಾಗೂ ಬಿಜೆಪಿ ಕಾರ್ಯಕರ್ತರ ಪಾತ್ರವಿರುವುದು ಸ್ಪಷ್ಟವಾಗಿ ದೃಢಪಟ್ಟಿದೆ. ಆರೋಪಿಗಳಲ್ಲಿ 15 ಮಂದಿ ಟಿಡಿಪಿ ಸದಸ್ಯರು, ಉಳಿದ ನಾಲ್ವರು ಬಿಜೆಪಿಯವರೆಂದು ಅವರು ಹೇಳಿದ್ದಾರೆ.

ಈಗಾಗಲೇ 13 ಮಂದಿ ಟಿಡಿಪಿ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆಂದು ಡಿಜಿಪಿ ಹೇಳಿದ್ದಾರೆ.

ರಾಜ್ಯದಲ್ಲಿ ಕೋಮುಸೌಹಾರ್ದತೆಯನ್ನು ಹದಗೆಡಿಸುವ ದುರುದ್ದೇಶಪೂರ್ವಕ ಪ್ರಯತ್ನಗಳನ್ನು ಕೆಲವು ರಾಜಕೀಯ ಪಕ್ಷಗಳು ನಡೆಸುತ್ತಿವೆಯೆಂದು ಸವಾಂಗ್ ಅವರು ತುರ್ತು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

2020ರ ಸೆಪ್ಟೆಂಬರ್‌ನಲ್ಲಿ ಬೊಮ್ಮಲೂರು ಗ್ರಾಮದಲ್ಲಿ ವಿನಾಯಕ ವಿಗ್ರಹವನ್ನು ಅಪವಿತ್ರಗೊಳಿಸಲಾಗಿದೆಯೆಂಬ ಸುಳ್ಳು ಸುದ್ದಿಯನ್ನು ಬಿಜೆಪಿ ಹಾಗೂ ಟಿಡಿಪಿ ಯ ತಲಾ ಇಬ್ಬರು ಕಾರ್ಯಕರ್ತರು ಹರಡಿದ್ದಾರೆಂದು ಅವರು ಹೇಳಿದರು. ಬಡ್ವೇಲ್ ಎಂಬಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಟಿಡಿಪಿ ಕಾರ್ಯಕರ್ತನೊಬ್ಬ, ಭೂವಿವಾದಕ್ಕೆ ಸಂಬಂಧಿಸಿ ವಿವಾದದಲ್ಲಿ ಗೊಂದಲ ಸೃಷ್ಟಿಸಲು ಅಂಜನೇಯ ವಿಗ್ರಹವನ್ನು ಅಪವಿತ್ರಗೊಳಿಸಿದ್ದಾನೆ. ಕರ್ನೂಲ್ ಜಿಲ್ಲೆಯ ಮಡ್ಡಿಕೇರದಲ್ಲಿರುವ ಮಾದಮ್ಮ ದೇವಾಲಯವನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ನಾಲ್ವರು ಟಿಡಿಪಿ ಸದಸ್ಯರ ಸಹಿತ ಎಂಟು ಮಂದಿಯನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂನ ಗೋಲ್ಗೊಂಡ ಮಂಡಲದ ದೇವಾಲಯವೊಂದರಲ್ಲಿ ವಿನಾಯಕ ವಿಗ್ರಹದ ಕೈಗಳನ್ನು ಕತ್ತರಿಸಲಾಗಿದೆಯೆಂಬ ಸುಳ್ಳು ಸುದ್ದಿಯನ್ನು ಹರಡಿದ್ದಕ್ಕಾಗಿ ಟಿಡಿಪಿ ಸದಸ್ಯನೊಬ್ಬನನ್ನು ಬಂಧಿಸಲಾಗಿದೆಯೆಂದು ಡಿಜಿಪಿ ಸಾವಂಗ್ ತಿಳಿಸಿದು.

ಕಳೆದ ಕೆಲವು ತಿಂಗಳುಗಳಲ್ಲಿ ಆಂಧ್ರಪ್ರದೇಶಾದ್ಯಂತ ಹಿಂದೂ ಆರಾಧನಾ ಕೇಂದ್ರಗಳ ಮೇಲಿ ನಡೆದಿರುವ ದಾಳಿಗಳಿಗೆ ಸಂಬಂಧಿಸಿ 40ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ದಾಳಿಕೋರರು ವಿಗ್ರಹಗಳನ್ನು ನಾಶಪಡಿಸಿದ್ದರು ಹಾಗೂ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸಿದ್ದರು. ರಾಜ್ಯದಲ್ಲಿ ದೇವಾಲಯ ದಾಳಿಗಳಿಗೆ ಕ್ರೈಸ್ತಧರ್ಮನುಯಾಯಿಯಾದ ವೈ.ಎಸ್.ಜಗನ್ ಮನೋಹನ್ ರೆಡ್ಡಿ ಕುಮ್ಮಕ್ಕು ನೀಡುತ್ತಿದ್ದಾರೆಂದು ಬಿಜೆಪಿ ಹಾಗೂ ಟಿಡಿಪಿ ಪಕ್ಷಗಳು ಆರೋಪಿಸಿದ್ದವು.

ತನ್ನ ಸರಕಾರದ ಅಭಿವೃದ್ಧಿ ಕಾರ್ಯಸೂಚಿಗೆ ಅಡ್ಡಿಪಡಿಸುವುದಕ್ಕಾಗಿ ದೇವಾಲಯ ದಾಳಿಗಳ ಸಂಚು ನಡೆದಿರುವುದಾಗಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಪಾದಿಸಿದ ಬೆನ್ನಲ್ಲೇ, ಡಿಜಿಪಿ ಸಾವಂಗ್ ಈ ಹೇಳಿಕೆ ನೀಡಿದ್ದಾರೆ.

ದೇವಾಲಯ ದಾಳಿಗಳ ಹಿಂದೆ ತಮ್ಮ ಪಕ್ಷದ ಕಾರ್ಯಕರ್ತರ ಕೈವಾಡವಿದೆಯೆಬ ಡಿಜಿಪಿ ಸಾವಂಗ್ ಅವರ ಹೇಳಿಕೆಗೆ ಬಿಜೆಪಿ ಹಾಗೂ ಟಿಡಿಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಾವಂಗ್ ಅವರು ರಾಜ್ಯ ಡಿಜಿಪಿ ಆಗಿರವುದಕ್ಕಿಂತ ವೈಆರ್‌ಎಸ್ ಕಾಂಗ್ರೆಸ್ ಪಕ್ಷದ ವಕ್ತಾರ ಹುದ್ದೆಗೆ ಯೋಗ್ಯರಾಗಿದ್ದಾರೆ ಎಂದು ಟಿಡಿಪಿ ಅಧ್ಯಕ್ಷ ಅಚ್ಚನನಾಯ್ಡು ಟ್ವೀಟ್ ಮಾಡಿದ್ದಾರೆ.

ಡಿಜಿಪಿಯವರು ಹೊಸ ರಾಜಕೀಯ ನಾಟಕವನ್ನು ಅನಾವರಣಗೊಳಿಸಿದ್ದಾರೆಂದು ಆಂಧ್ರ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣು ವರ್ಧನ್ ರೆಡ್ಡಿ ಅವರು ಟೀಕಿಸಿದ್ದಾರೆ. ಆಂಧ್ರಪ್ರದೇಶ ಪೊಲೀಸರ ಅದಕ್ಷತೆಯನ್ನು ಮರೆಮಾಚಲು ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಇದಾಗಿದೆಯೆಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News