ರೈತರ ಆಕ್ರೋಶಕ್ಕೆ ಬಿಜೆಪಿ ಜವಾಬ್ದಾರಿ: ಅಖಿಲೇಶ್ ಯಾದವ್
Update: 2021-01-27 16:38 GMT
ಲಕ್ನೊ, ಜ. 27: ರೈತರ ಅಸಮಾಧಾನ ಆಕ್ರೋಶಕ್ಕೆ ತಿರುಗಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾರಣ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಬುಧವಾರ ಆರೋಪಿಸಿದ್ದಾರೆ.
ಅಲ್ಲದೆ ನೂತನ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂದೆಗೆಯುವಂತೆ ಅವರು ಆಗ್ರಹಿಸಿದ್ದಾರೆ.
ದಿಲ್ಲಿಯಲ್ಲಿ ಮಂಗಳವಾರ ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭ ಹಲವು ಕಡೆಗಳಲ್ಲಿ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರಕಾರ ರೈತರನ್ನು ನಿರಂತರ ನಿರ್ಲಕ್ಷಿಸಿದೆ, ಅಮಾನಿಸಿದೆ ಹಾಗೂ ಅವರ ವಿರುದ್ಧ ಆರೋಪ ಮಾಡಿದೆ. ಇದು ರೈತರ ಅಸಮಾಧಾನ ಆಕ್ರೋಶಕ್ಕೆ ತಿರುಗಲು ನಿರ್ಣಾಯಕ ಕಾರಣವಾಯಿತು. ಪ್ರಸಕ್ತ ಪರಿಸ್ಥಿತಿಗೆ ಬಿಜೆಪಿ ಜವಾಬ್ದಾರಿ ಎಂದು ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿ ಹೇಳಿದ್ದಾರೆ.
ಕೇಂದ್ರ ಸರಕಾರ ಗಲಭೆಯ ನೈತಿಕ ಹೊಣೆ ಹೊತ್ತು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂದೆಗೆಯಬೇಕು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.