20 ರೂಪಾಯಿ ಕುರಿತು ವಾಗ್ವಾದ: ಇಡ್ಲಿ ಮಾರಾಟಗಾರನ ಹತ್ಯೆಗೈದ ಅಪರಿಚಿತ ಗ್ರಾಹಕರು

Update: 2021-02-06 16:37 GMT

ಮುಂಬೈ, ಫೆ. 6: ಇಪ್ಪತ್ತು ರೂಪಾಯಿ ಕುರಿತ ವಾಗ್ವಾದ ಉಂಟಾಗಿ ರಸ್ತೆ ಬದಿಯ 26 ವರ್ಷದ ಇಡ್ಲಿ ಮಾರಾಟಗಾರನನ್ನು ಅಪರಿಚಿತ ಗ್ರಾಹಕರು ಹತ್ಯೆಗೈದ ಘಟನೆ ಥಾಣೆಯ ಮೀರಾ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.

ಸಾವನ್ನಪ್ಪಿದ ಇಡ್ಲಿ ಮಾರಾಟಗಾರನನ್ನು ವಿರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಯಾದವ್ ಅವರ ರಸ್ತೆ ಬದಿಯ ಅಂಗಡಿಗೆ ಶುಕ್ರವಾರ ಮೂವರು ಅಪರಿಚಿತ ಗ್ರಾಹಕರು ಆಗಮಿಸಿದ್ದರು. ತಮ್ಮಲ್ಲಿ ಕೇವಲ 20 ರೂಪಾಯಿ ಮಾತ್ರ ಇರುವುದಾಗಿ ಹಾಗೂ ಇಡ್ಲಿ ನೀಡುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಉಂಟಾದ ವಾಗ್ವಾದ ಜಗಳಕ್ಕೆ ತಿರುಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಗಳದ ಸಂದರ್ಭ ಮೂವರು ಅಪರಿಚಿತ ಗ್ರಾಹಕರು ಯಾದವ್ ಅವರನ್ನು ದೂಡಿದ್ದಾರೆ. ಯಾದವ್ ಅವರು ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿವೆ. ಸಮೀಪದಲ್ಲಿದ್ದ ಜನರು ಕೂಡಲೇ ಧಾವಿಸಿ ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಮೀರಾ ರಸ್ತೆಯಲ್ಲಿರುವ ನಯಾ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಮೀರಾ ಭಾಯಂದರ್-ವಿಶಾಲ್ ವಿರಾರ್ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News