ಉ.ಪ್ರ:ದುಷ್ಕರ್ಮಿಗಳ ಗುಂಡಿಗೆ ಬಿಎಸ್‌ಪಿ ನಾಯಕ ಬಲಿ

Update: 2021-02-16 14:26 GMT
ಸಾಂದರ್ಭಿಕ ಚಿತ್ರ

ಅಝಮ್‌ಗಡ.ಫೆ.16: ಇಲ್ಲಿಯ ಮೆಹನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಳೆಯ ದ್ವೇಷದಿಂದ ಸ್ಥಳೀಯ ಬಿಎಸ್‌ಪಿ ನಾಯಕನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕಲಾಮುದ್ದೀನ್ ಖಾನ್ (60) ಸೋಮವಾರ ಸಂಜೆ ತನ್ನ ಮನೆಯ ಹೊರಗಡೆ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರ ಮೇಲೆ ಗುಂಡುಗಳನ್ನು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಖಾನ್ ಅವರನ್ನು ಲಾಲಗಂಜ್‌ನ ಸಮುದಾಯ ಆಸ್ಪತ್ರೆಗೆ ಕರೆದೊಯ್ದು ಬಳಿಕ ವಾರಣಾಸಿಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಗ್ರಾಮದ ಮಾಜಿ ಮುಖ್ಯಸ್ಥ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು,ಈ ಪೈಕಿ ಮೂವರನ್ನು ಬಂಧಿಸಲಾಗಿದೆ. ಹಳೆಯ ದ್ವೇಷ ಕೊಲೆಗೆ ಕಾರಣವೆನ್ನಲಾಗಿದೆ ಎಂದು ಎಸ್‌ಪಿ ಸುಧೀರಕುಮಾರ ಸಿಂಗ್ ತಿಳಿಸಿದರು.

ಖಾನ್ ಕೂಡ ಕ್ರಿಮಿನಲ್ ದಾಖಲೆ ಹೊಂದಿದ್ದು,ಅವರ ವಿರುದ್ಧ ಎರಡು ಕೊಲೆ ಸೇರಿದಂತೆ ಆರು ಪ್ರಕರಣಗಳಿದ್ದವು. ಈಗ ತನ್ನ ಪುತ್ರನೊಂದಿಗೆ ಲಕ್ನೋದಲ್ಲಿ ವಾಸವಿದ್ದ ಅವರು ಆಸ್ತಿ ವಹಿವಾಟು ನಡೆಸುತ್ತಿದ್ದರು. ರವಿವಾರವಷ್ಟೇ ಊರಿಗೆ ಮರಳಿದ್ದರು ಎಂದರು.

ಇತರ ಆರೋಪಿಗಳ ಬಂಧನಕ್ಕಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಖಾನ್ ಎರಡು ಬಾರಿ ಬಿಎಸ್‌ಪಿ ಟಿಕೆಟ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News