×
Ad

ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಆದಿತ್ಯನಾಥ್ ಸರಕಾರವು ಶಾಪವಾಗಿ ಪರಿಣಮಿಸಿದೆ: ಕಾಂಗ್ರೆಸ್

Update: 2021-02-18 19:16 IST

ಹೊಸದಿಲ್ಲಿ: ಉತ್ತರಪ್ರದೇಶದ ಉನ್ನಾವೋ ಎಂಬಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ದಲಿತ ಸಮುದಾಯಕ್ಕೆ ಸೇರಿದ ಬಾಲಕಿಯರು ಪ್ರಜ್ಞಾರಹಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಪೈಕಿ ಇಬ್ಬರು ಬಾಲಿಕಿಯರು ಮೃತಪಟ್ಟಿದ್ದರೆ, ಓರ್ವ ಬಾಲಕಿ ಗಂಭೀರಾವಸ್ಥೆಯಲ್ಲಿದ್ದಾಳೆಂದು ವರದಿಗಳು ತಿಳಿಸಿತ್ತು. ಈ ಕುರಿತಾದಂತೆ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರವನ್ನು ಟೀಕಿಸಿದ ಕಾಂಗ್ರೆಸ್ ವಕ್ತಾರೆ ಅಲ್ಕಾ ಲಾಂಬಾ, "ಆದಿತ್ಯನಾಥ್ ಸರಕಾರವು ಮಹಿಳೆಯರ ಮತ್ತು ಬಾಲಕಿಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಹತ್ರಾಸ್ ಘಟನೆಯ ನಂತರ, ಈಗ ಉನ್ನಾವೊ. ಆದಿತ್ಯನಾಥ್ ಸರ್ಕಾರ ವಿಫಲವಾಗಿದೆ. 'ಬೇಟಿ ಬಚಾವೊ' ಘೋಷಣೆ ಒಂದು ಎಚ್ಚರಿಕೆಯಂತೆ ತೋರುತ್ತಿದೆ. ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರವು ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಶಾಪವಾಗಿ ಪರಿಣಮಿಸಿದೆ" ಎಂದು ಲಾಂಬಾ ಹೇಳಿದರು.

"ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ ಮತ್ತು ಬಲಿಪಶುಗಳ ಕುಟುಂಬ ಸದಸ್ಯರನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಉತ್ತರಪ್ರದೇಶವು ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಅಪರಾಧದ ಕೇಂದ್ರಬಿಂದುವಾಗಿದೆ" ಎಂದು ಅವರು ಆರೋಪಿಸಿದರು.

ಬಿಜೆಪಿ ನಾಯಕಿ ಮತ್ತು ಸಂಸದೆ ಸ್ಮೃತಿ ಇರಾನಿ ಈ ಪ್ರಕರಣದ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಲಂಬಾ ಪ್ರಶ್ನಿಸಿದ್ದಾರೆ.

"ಸ್ಮೃತಿ ಇರಾನಿ ಏಕೆ ಮೌನವಾಗಿದ್ದಾರೆ? ಅವರು ಉತ್ತರಪ್ರದೇಶದಿಂದ ಸಂಸದರಾಗಿದ್ದಾರೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದಾರೆ. ಇದು ಡಬಲ್ ಎಂಜಿನ್ ಸರ್ಕಾರ, ಹಾಗಾದರೆ ಹುಡುಗಿಯರಿಗೆಬಾಲಕಿಯರಿಗೆ ಸುರಕ್ಷತೆ ಮತ್ತು ನ್ಯಾಯ ಏಕೆ ಇಲ್ಲ?" ಎಂದು ಅಲ್ಕಾ ಲಾಂಬಾ ಖಾರವಾಗಿ ಪ್ರಶ್ನಿಸಿದರು.

ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಇನ್ನೂ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ವಿಮಾನದ ಮೂಲಕ ಏಕೆ ಕಳುಹಿಸಲಾಗಿಲ್ಲ ಎಂದು ಲಂಬಾ ಕೇಳಿದರು. "ಸತ್ಯವನ್ನು ಹೊರತರುವುದು ಮತ್ತು ಪ್ರಕರಣ ಅಪರಾಧಿ ಯಾರು ಎಂಬುದನ್ನು ಬಹಿರಂಗಪಡಿಸುವುದು ಮುಖ್ಯ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News