40 ಲಕ್ಷ ಟ್ರ್ಯಾಕ್ಟರ್ ಗಳೊಂದಿಗೆ ಪಾರ್ಲಿಮೆಂಟ್ ಮಾರ್ಚ್ ನಡೆಸುತ್ತೇವೆ: ಎಚ್ಚರಿಕೆ ನೀಡಿದ ರಾಕೇಶ್ ಟಿಕಾಯತ್
ಸಿಕಾರ್ (ರಾಜಸ್ಥಾನ): ಕೇಂದ್ರ ಸರಕಾರವು ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು ಮಾಡದಿದ್ದಲ್ಲಿ ಪ್ರತಿಭಟನಾನಿರತ ರೈತರು ಸಂಸತ್ ಗೆ ಘೇರಾವ್ ಹಾಕಲಿದ್ದಾರೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿಕೆ ನೀಡಿದ್ದಾರೆ. ಈ ಬಾರಿ 4 ಲಕ್ಷ ಅಲ್ಲ 40 ಲಕ್ಷ ಟ್ರ್ಯಾಕ್ಟರ್ ಗಳು ಇರುತ್ತವೆ. ಯಾವಾಗ ಕರೆ ನೀಡಬಹುದು ಎಂದು ಹೇಳಲು ಸಾಧ್ಯವಿಲ್ಲ. ರೈತರು ತಯಾರಾಗಿರಿ ಎಂದು ಹೇಳಿಕೆ ನೀಡಿದ್ದಾರೆ.
ಮಂಗಳವಾರ ರಾಜಸ್ಥಾನದ ಸಿಕಾರ್ ನಲ್ಲಿ ಕಿಸಾನ್ ಮೋರ್ಚಾದ ಮಹಾನ್ ಪಂಚಾಯತ್ ಅನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. "ಈ ಬಾರಿ ಸಂಸತ್ ಗೆ ಘೇರಾವ್ ಹಾಕಲು ನಾವು ಕರೆ ನೀಡಲಿದ್ದೇವೆ. ಈ ಬಾರಿ 40 ಲಕ್ಷ ಟ್ರ್ಯಾಕ್ಟರ್ ಗಳೊಂದಿಗೆ ನಾವು ಸಂಸತ್ ಕಡೆಗೆ ಮಾರ್ಚ್ ಮಾಡುತ್ತೇವೆ. ಇದನ್ನು ಇಲ್ಲಿ ಘೋಷಿಸಿಯೇ ನಾವು ದಿಲ್ಲಿಗೆ ತೆರಳುತ್ತಿದ್ದೇವೆ. ಪ್ರತಿಭಟನಾ ನಿರತ ರೈತರು ಇಂಡಿಯಾ ಗೇಟ್ ಬಳಿ ಇರುವ ಉದ್ಯಾನವನಗಳನ್ನು ಉಳುಮೆ ಮಾಡಿ ಅಲ್ಲಿ ಬೆಳೆ ಬೆಳೆಯುತ್ತಾರೆ" ಎಂದು ಹೇಳಿಕೆ ನೀಡಿದ್ದಾರೆ.
"ಸಂಸತ್ ಘೇರಾವ್ ದಿನವನ್ನು ಯುನೈಟೆಡ್ ಫ್ರಂಟ್ ನಾಯಕರು ಘೋಷಿಸಲಿದ್ದಾರೆ. ಯಾವ ಸಂದರ್ಭದಲ್ಲಿ ಕರೆ ನೀಡಬಹುದು ಎಂದು ಹೇಳಲಾಗುವುದಿಲ್ಲ. ಎಲ್ಲ ರೈತರೂ ಸಿದ್ಧರಾಗಿರಬೇಕು. ಈ ದೇಶದ ರೈತರು ತ್ರಿವರ್ಣ ಧ್ವಜವನ್ನು ಪ್ರೀತಿಸುತ್ತಾರೆ. ಆದರೆ ಈ ದೇಶದ ನಾಯಕರು ಪ್ರೀತಿಸುವುದಿಲ್ಲ ಎಂದು ಟಿಕಾಯತ್ ಹೇಳಿಕೆ ನೀಡಿದರು.