ಗೊಂಬೆಯಾಟವಯ್ಯ....ಇದು ಗೊಂಬೆಯಾಟವಯ್ಯ....!

Update: 2021-02-28 05:02 GMT

ಭಾರತ ಜಾಗತಿಕ ಗೊಂಬೆ ಉತ್ಪಾದನಾ ಕೇಂದ್ರವಾಗಬೇಕು’’ ಎಂದು ಪ್ರಧಾನ ಚೌಕೀದಾರರು ಘೋಷಿಸಿದ್ದೇ, ಪತ್ರಕರ್ತ ಎಂಜಲು ಕಾಸಿ ಕೀ ಕೊಟ್ಟ ಗೊಂಬೆಯಂತೆ ಎದ್ದು ನಿಂತ. ದೇಶವನ್ನೇ ಗೊಂಬೆಯಂತೆ ಕುಣಿಸಿರುವ ಚೌಕೀದಾರರು, ತನ್ನ ಭಕ್ತ ಗೊಂಬೆಗಳನ್ನೆಲ್ಲ ವಿದೇಶಕ್ಕೆ ಮಾರಿ ದೇಶವನ್ನು ಶ್ರೀಮಂತಗೊಳಿಸುವ ಯೋಜನೆಯಿರಬಹುದೇ? ಎಂದು ಕಾಸಿ ಚೌಕೀದಾರರನ್ನು ಹುಡುಕಿ ನೇರವಾಗಿ ಅಂಬಾನಿ ನಿವಾಸದ ಕಡೆಗೆ ಧಾವಿಸಿದ. ಅಲ್ಲಿ ಗೇಟ್ ಬಾಗಿಲಲ್ಲಿ ಚೌಕೀದಾರರು ಕಾಣದೇ ಇದ್ದಾಗ, ಅಲ್ಲಿಂದ ನೇರವಾಗಿ ಹೊಸದಾಗಿ ಉದ್ಘಾಟನೆಗೊಂಡ ಕ್ರೀಡಾಂಗಣದ ಕಡೆಗೆ ಧಾವಿಸಿದ. ನೋಡಿದರೆ ಚೌಕೀದಾರರು ಮೈದಾನದಲ್ಲಿ ಕಸ ಗುಡಿಸುತ್ತಾ ಇದ್ದಾರೆ. ಅಂಬಾನಿ ಎಂಡ್‌ನಿಂದ ಗುಡಿಸುತ್ತಾ ಅದಾನಿ ಎಂಡ್‌ಗೆ ತಲುಪಲು ಇನ್ನೇನು ಕೆಲವೇ ಕ್ಷಣ ಇದೆ ಎನ್ನುವಾಗ ಪತ್ರಕರ್ತ ಎಂಜಲು ಕಾಸಿ ಅವರನ್ನು ರನ್ ಔಟ್ ಮಾಡಿದ. ಚೌಕೀದಾರರು ತಮಗೆ ತಾವೇ ‘‘ಚನ್ನಪಟ್ಟಣದ ಮುದ್ದಿನ ಗೊಂಬೆ, ಟ್ರಂಪ್‌ನ ಪ್ರೀತಿಯ ಕುಣಿಯುವ ಗೊಂಬೆ, ಅದಾನಿ-ಅಂಬಾನಿ ಆಡಿಸೋ ಗೊಂಬೆ....ಬಣ್ಣ ಬಣ್ಣದ ವೇಷದ ಗೊಂಬೆ....’’ ಎಂದು ಗುನುಗುತ್ತಿರುವಲ್ಲಿ..... ‘‘ಸಾರ್....ನಾನು ಕಾಸಿ...’’ ಹಲ್ಲು ಕಿರಿಯುತ್ತಾ ನಿಂತ.

‘‘ಏನ್ರೀ....ಬೆಂಗಳೂರಿನ ಗೊಂಬೆ ಹೇಗಿದೆ....?’’ ಚೌಕೀದಾರರು ಕೇಳಿದರು.

‘‘ಚೆನ್ನಾಗಿವೆ ಸಾರ್. ಆ ಗೊಂಬೆಗೆ ಇವತ್ತು ಹುಟ್ಟಿದ ಹಬ್ಬ ಸಾರ್....’’ ಕಾಸಿ ಹಲ್ಲುಕಿರಿದು ಹೇಳಿದ.

‘‘ನೋಡ್ರೀ....ಆ ಗೊಂಬೆಯೇನೋ ಓಕೆ. ಆದರೆ ಮುಖದಲ್ಲಿ ಒಂದಿಷ್ಟು ನಗು ಬೇಕ್ರಿ...ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಗುವ ಗೊಂಬೆಗಳಿಗೆ ಬೇಡಿಕೆ ಜಾಸ್ತಿ....ನಿಮ್ಮ ಶಿಕಾರಿ ಪುರದ ಗೊಂಬೆ ಇದೆಯಲ್ಲ....ಅದು ಹಾರರ್ ಪಿಚ್ಚರ್‌ನಲ್ಲಿ ಬರತ್ತಲ್ಲ..ಆ ಥರ ಕಾಣತ್ತೆ..ಅಂತಹ ಗೊಂಬೆಯನ್ನು ಯಾರು ಕೊಂಡ್ಕೋತಾರೆ? ಬೆಂಗಳೂರಿನಿಂದ ಕಂಪ್ಲೇಂಟ್ ಮೇಲೆ ಕಂಪ್ಲೇಂಟ್....ಈ ಗೊಂಬೇನ ವಾಪಸ್ ತಗೊಳ್ಳಿ....ಬೇರೆ ಶೋಷಿತ ಸಮುದಾಯಕ್ಕೆ ಸೇರಿದ ಒಂದು ಕಾಮಿಡಿ ಗೊಂಬೆ ಇದೆ....ಅದನ್ನು ಮಾರ್ಕೆಟ್‌ಗೆ ಬಿಡಿ...ಅಂತ....’’ ಎನ್ನುತ್ತಾ ಚೌಕೀದಾರರು ನಿಟ್ಟುಸಿರು ಬಿಟ್ಟರು. ‘‘ಸಾರ್...ಮೇಡ್ ಇಂಡಿಯಾ ಮೂಲಕ ದೇಶ ಅದೇನೇನೋ ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಜನ ನಿರೀಕ್ಷಿಸಿದ್ದರು. ನೀವು ಗೊಂಬೆ ಮಾರಾಟಕ್ಕಿಳಿದಿದ್ದೀರಲ್ಲ ಸಾರ್....’’ ಕಾಸಿ ಕೇಳಿದ.

‘‘ನೋಡ್ರೀ....ನೋಟನ್ನು ಆಟಿಕೆ ಮಾಡಿ ಆಡಿ ಆಯಿತು...ಸಣ್ಣ ಉದ್ದಿಮೆಗಳನ್ನು ಆಟಿಕೆ ಮಾಡಿ ಆಡಿ ಆಯಿತು....ನಾನು ಚೌಕೀದಾರನಾಗಿ ಬಂದ ದಿನದಿಂದ ಎಲ್ಲ ಆಟಿಕೆಗಳಲ್ಲೂ ಆಡಿ ಜನರನ್ನು ರಂಜಿಸಿ ಅವುಗಳನ್ನು ಮುರಿದು ಹಾಕಿದ್ದೇನೆ. ಭಾರತ ಆತ್ಮನಿರ್ಭರವಾಗಬೇಕು, ಹಳೇ ಆಟಿಕೆಯಿಂದ ಹೊಸ ಆಟಿಕೆಯ ಕಡೆಗೆ ಮುನ್ನಡೆಯಬೇಕು ಎಂದು ಅವುಗಳನ್ನು ಮುರಿದು ಹಾಕಿರುವುದು. ಈಗ ಹೊಸ ಆಟಿಕೆಗಳನ್ನು ಉತ್ಪಾದನೆ ಮಾಡಲು ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಆಟಿಕೆಗಳ ಉತ್ಪಾದನೆಯಾಗಲಿವೆ....ಎಲ್ಲೆಂದರಲ್ಲಿ ಗೊಂಬೆಗಳ ಅಂಗಡಿ, ಗೊಂಬೆಗಳ ಹಟ್ಟಿ, ರೈತರ ರೂಪದ ಗೊಂಬೆಗಳು, ಗೋವಿನ ರೂಪದ ಗೊಂಬೆಗಳು....ಎಲ್ಲಿ ನೋಡಿದರಲ್ಲಿ... ಗೊಂಬೆಗಳು....ಸೂತ್ರದ ಗೊಂಬೆಯಾಟವನ್ನು ರಾಷ್ಟ್ರೀಯ ಆಟವಾಗಿ ಘೋಷಿಸಲಾಗುವುದು...ಪಟೇಲರು, ಗೋಳ್ವಾಲ್ಕರ್, ಸಾವರ್ಕರ್ ಮೊದಲಾದವರ ಗೊಂಬೆಗಳಿಗೆ ಅಂತರ್‌ರಾಷ್ಟ್ರೀಯ ಮಟ್ಟದ ಮಾರುಕಟ್ಟೆಗಳನ್ನು ಒದಗಿಸಿ ಕೊಡಲಾಗುವುದು. ಹಾಗೆಯೇ ಮುಂದಿನ ದಿನಗಳಲ್ಲಿ ಮಾಧ್ಯಮ ಗೊಂಬೆಗಳ ಉತ್ಪಾದನೆಗೆ ಇನ್ನಷ್ಟು ಬಂಡವಾಳ ಹೂಡಲು ಸೂಚನೆ ನೀಡಿದ್ದೇನೆ. ಪತ್ರಕರ್ತ ಗೊಂಬೆಗಳು, ಮಾಧ್ಯಮ ಗೊಂಬೆಗಳ ತಯಾರಿಗೆ ಅದಾನಿ ಮತ್ತು ಅಂಬಾನಿಗಳು ಇನ್ನಷ್ಟು ಹೂಡಿಕೆಗಳನ್ನು ಮಾಡಲಿದ್ದಾರೆ. ವಿದೇಶಗಳಿಗೆ ರಫ್ತು ಮಾಡಲು ಯೋಗ್ಯವುಳ್ಳ ಗುಣಮಟ್ಟದ ಗೊಂಬೆಗಳ ತಯಾರಿಗೆ ಆದ್ಯತೆ ನೀಡಲಿದ್ದೇವೆ. ರಿಮೋಟ್ ಮೂಲಕ ಕುಣಿಯುವ ವಿಶಿಷ್ಟ ಗೊಂಬೆಗಳೂ ಇದರಲ್ಲಿ ಸೇರಿವೆ. ಗೊಂಬೆ ತಯಾರಿ ರಾಷ್ಟ್ರೀಯ ಉದ್ದಿಮೆಯಾಗಿ ಪರಿವರ್ತನೆಯಾಗಲಿದ್ದು, ಎಲ್ಲ ಇಲಾಖೆಗಳು ಈ ಗೊಂಬೆ ಉತ್ಪಾದನೆಯಲ್ಲಿ ಕೈ ಜೋಡಿಸಲಿವೆೆ. ನ್ಯಾಯಾಲಯದಲ್ಲಿ ಈವರೆಗೆ ನ್ಯಾಯ ದೇವತೆಯ ಗೊಂಬೆಯಷ್ಟೇ ಇತ್ತು. ಇನ್ನು ಮುಂದೆ ಆ ಗೊಂಬೆಗೆ ನೀಡಿದಷ್ಟೇ ಮಹತ್ವವನ್ನು ನ್ಯಾಯಾಲಯದೊಳಗಿರುವ ಉಳಿದವರಿಗೂ ನೀಡಲಾಗುತ್ತದೆ. ಸರಕಾರದ ಕೆಲಸ ಉದ್ಯಮ ನಡೆಸುವುದಲ್ಲ, ಗೊಂಬೆ ತಯಾರಿಸುವುದು ಮತ್ತು ಗೊಂಬೆ ಆಡಿಸುವುದು ಎನ್ನುವುದನ್ನು ವಿಶ್ವಮಟ್ಟದಲ್ಲಿ ನಾವು ತೋರಿಸಲಿದ್ದೇವೆ...ಎಲ್ಲ ಸರಕಾರಿ ಕಚೇರಿಗಳಲ್ಲಿ ‘ಸರಕಾರಿ ಕೆಲಸ ಗೊಂಬೆಯ ಕೆಲಸ’ ಎಂದು ಬರೆಸಲಿದ್ದೇನೆ. ಅಂಬೇಡ್ಕರ್ ಗೊಂಬೆಗಳನ್ನು ವಿಶೇಷವಾಗಿ ತಯಾರಿಸಿ ಪ್ರತಿ ಶೋಷಿತ ಸಮುದಾಯದವರ ಮನೆಗೆ ರೇಷನ್ ಮೂಲಕ ಹಂಚಲಿದ್ದೇವೆ. ‘ಗೊಂಬೆಯಾಟವಯ್ಯ...’ ಹಾಡು ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ರಾಷ್ಟ್ರಭಕ್ತಿ ಹಾಡಾಗಿ ಘೋಷಿಸಲ್ಪಡುತ್ತದೆ....’’ ಚೌಕೀದಾರರು ಮುಂದಿನ ದಿನಗಳ ಸರಕಾರದ ಯೋಜನೆಗಳನ್ನು ತೆರೆದಿಟ್ಟರು. ಕಾಸಿ ಎಲ್ಲವನ್ನು ಗೊಂಬೆಯಂತೆ ತಲೆಯಾಡಿಸುತ್ತಾ ಆಲಿಸಿ ಪ್ರಶ್ನಿಸಿದ ‘‘ಸಾರ್...ಈಗಾಗಲೇ ಇಷ್ಟು ದೊಡ್ಡ ಕ್ರೀಡಾಂಗಣವನ್ನು ಉದ್ಘಾಟಿಸಿದ್ದೀರಿ. ಇಲ್ಲಿ ಕ್ರಿಕೆಟ್ ಆಡಿಸುವ ಬದಲು ಗೊಂಬೆಯಾಡಿಸುವ ಉದ್ದೇಶವಿದೆಯಾ?’’

‘‘ನೋಡಿ...ಈ ಕ್ರೀಡಾಂಗಣ ಇರುವುದೇ ಕ್ರಿಕೆಟ್ ಗೊಂಬೆಗಳಿಗೆ. 11 ಗೊಂಬೆಗಳು ಆಡುತ್ತವೆ. ಅದನ್ನು 11 ಲಕ್ಷ ಗೊಂಬೆಗಳು ಸ್ಟೇಡಿಯಂನಲ್ಲಿ ಕೂತು ನೋಡುತ್ತವೆ. ಹಿಂದಿನಿಂದ ಬುಕ್ಕಿಗಳು ಈ ಗೊಂಬೆಗಳನ್ನು ಕುಣಿಸುತ್ತಾರೆ. ಬುಕ್ಕಿಗಳನ್ನು ಅಂಬಾನಿ ಎಂಡ್ ಅದಾನಿ ದಾರ ಹಿಡಿದು ಕುಣಿಸುತ್ತಾರೆ....ಈ ಮೂಲಕ ದೇಶದಲ್ಲಿ ಕ್ರಿಕೆಟ್ ಗೊಂಬೆಯಾಟ ಇನ್ನಷ್ಟು ಜನಪ್ರಿಯಗೊಳ್ಳಲಿದೆ...’’ ಚೌಕೀದಾರರು ವಿವರಿಸಿದರು. ‘‘ಸಾರ್...ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಏನಾದರೂ ಹೇಳಲಿಕ್ಕಿದೆಯಾ...’’ ಕಾಸಿ ಕರ್ನಾಟಕದ ಕಡೆಗೆ ಕೈ ತೋರಿಸಿದ.

‘‘ಕರ್ನಾಟಕದಲ್ಲಿ ಎರಡು ತಂದೆ-ಮಗ ಗೊಂಬೆಗಳು ತುಸು ಜನಪ್ರಿಯ ಇವೆ. ಒಮ್ಮಿಮ್ಮೆ ಒಂದೊಂದು ಥರ ಕುಣಿಯುತ್ತವೆ ಎನ್ನುವುದು ಅದರ ಮೇಲಿನ ದೂರುಗಳು. ಆದರೆ ರಿಮೋಟ್‌ನ್ನು ಇನ್ನಷ್ಟು ಆಧುನಿಕಗೊಳಿಸಿದರೆ ಈ ಗೊಂಬೆಗಳನ್ನು ನಮಗೆ ಬೇಕಾದ ಹಾಗೆ ಕುಣಿಸಬಹುದು. ಈ ಗೊಂಬೆಗಳನ್ನು ನಂಬಿ ಒಂದು ಕಾಲದಲ್ಲಿ ನಮ್ಮ ‘ಹಾರರ್ ಗೊಂಬೆ’ ಬೀದಿ ಪಾಲಾಗಿತ್ತು. ಇದೇ ಗೊಂಬೆಗಳನ್ನು ಇನ್ನಷ್ಟು ಸುಧಾರಿತ ಗೊಂಬೆಗಳಾಗಿ ಪರಿವರ್ತಿಸುವುದು ನಮ್ಮ ಗುರಿ....ಹಾಗೆಯೇ ಕರ್ನಾಟಕದ ಸಂಸದ ಗೊಂಬೆಗಳು ಬಹಳ ಚೆನ್ನಾಗಿ ಕುಣಿಯುತ್ತವೆ. ಮುಖ್ಯವಾಗಿ ಇವುಗಳು ಮ್ಯೂಟ್ ಗೊಂಬೆಗಳು. ಇವುಗಳ ರಿಮೋಟ್ ಕೂಡ ಚೆನ್ನಾಗಿವೆ. ಇಂತಹ ಗೊಂಬೆಗಳನ್ನು ಇನ್ನಷ್ಟು ಉತ್ಪಾದಿಸುವುದಕ್ಕಾಗಿಯೇ ನಾವೀಗ ರಾಮಮಂದಿರ ಗೊಂಬೆಗಾಗಿ ಚಂದಾ ಸಂಗ್ರಹಿಸುತ್ತಿದ್ದೇವೆ....’’ ಚೌಕೀದಾರರು ತಿಳಿಸಿದರು.

‘‘ಅಂತೂ ಇಡೀ ಭಾರತವನ್ನೇ ಗೊಂಬೆಗಳ ರಾಷ್ಟ್ರವಾಗಿ ಪರಿವರ್ತಿಸಲಿದ್ದೀರಿ....’’ ಕಾಸಿ ಖುಷಿಯಿಂದ ಕೇಳಿದ.

‘‘ಹೌದು...ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ಎಲ್ಲಿ ನೋಡಿದರು ಭಾರತವೆಂಬ ಗೊಂಬೆಯ ಕುರಿತಂತೆಯೇ ಮಾತುಗಳು ಕೇಳಿ ಬರುತ್ತಿವೆ. ಇದು ನನ್ನ ಆಡಳಿತದ ಸಾಧನೆ. ನಾವು ಹೇಳಿದಂತೆ ಕುಣಿಯುವ ಗೊಂಬೆ ಎಂದು ಅಮೆರಿಕ, ಇಸ್ರೇಲ್, ಬ್ರಿಟನ್ ಮೊದಲಾದ ದೇಶಗಳು ಈಗಾಗಲೇ ನಮಗೆ ಪ್ರಮಾಣ ಪತ್ರ ನೀಡಿವೆ. ವಿಶ್ವ ಬ್ಯಾಂಕ್ ಕೂಡ, ನಾವು ಚೆನ್ನಾಗಿ ಕುಣಿದಿದ್ದೇವೆ...‘ಲಾಕ್‌ಡೌನ್ ಸಂದರ್ಭದ ವಿಶ್ವಬ್ಯಾಂಕಿನ ಪ್ರೀತಿಯ ಗೊಂಬೆ’ ಎಂಬ ಪ್ರಶಸ್ತಿಗೂ ಭಾಜನರಾಗಿದ್ದೇವೆ...’’ ಚೌಕೀದಾರರು ಹೆಮ್ಮೆಯಿಂದ ಹೇಳಿದರು.

ಕಾಸಿಯೂ ಅದನ್ನು ಕೇಳಿ ಕೀ ಕೊಟ್ಟ ಗೊಂಬೆಯಂತೆ ಹಿರಿ ಹಿರಿ ಹಿಗ್ಗಿದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News