ಬಿಜೆಪಿಗೆ ಕಡಿವಾಣ ಹಾಕಲು ಮಮತಾ ಬ್ಯಾನರ್ಜಿಗೆ ಆರ್ ಜೆಡಿ ಬೆಂಬಲ: ತೇಜಸ್ವಿ ಯಾದವ್
Update: 2021-03-01 13:45 GMT
ಹೊಸದಿಲ್ಲಿ: ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಸೋಮವಾರ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷವು ತೃಣಮೂಲ ಕಾಂಗ್ರೆಸ್ ಗೆ ಬೆಂಬಲ ನೀಡಲಿದೆ ಎಂದು ತಿಳಿಸಿದರು.
“ಮಮತಾಜೀಗೆ ಸಂಪೂರ್ಣ ಬೆಂಬಲ ನೀಡುವುದು ಲಾಲೂಜೀ ಅವರ ನಿರ್ಧಾರ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಿದೆ’’ಎಂದು ಸಭೆಯ ಬಳಿಕ ತೇಜಸ್ವಿ ತಿಳಿಸಿದರು.
ಆರ್ ಜೆಡಿಯಿಂದ ಅತ್ಯಂತ ಅಗತ್ಯದ ಬೆಂಬಲ ಲಭಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಮಮತಾ, ‘’ತೇಜಸ್ವಿ ಭಾಯ್ ಹೋರಾಟ ನಡೆಸಿದ್ದರು. ನಾವೆಲ್ಲರೂ ಹೋರಾಟ ನಡೆಸುತ್ತಿದ್ದೇವೆ. ಇಬ್ಬರದ್ದೂ ಹೋರಾಟವಾಗಿದೆ’’ಎಂದರು.
ಆರ್ ಜೆಡಿ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಂಗಾಳದಲ್ಲಿ ಕಾಂಗ್ರೆಸ್ ಬದಲಿಗೆ ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ ಬೆಂಬಲ ನೀಡಲು ನಿರ್ಧರಿಸಿದೆ.