ಹತ್ರಸ್: ಜಾಮೀನಿನ ಮೇಲೆ ಹೊರಬಂದು ಲೈಂಗಿಕ ಕಿರುಕುಳ ಸಂತ್ರಸ್ತೆಯ ತಂದೆಯ ಹತ್ಯೆಗೈದ ಆರೋಪಿ

Update: 2021-03-02 07:45 GMT

ಲಕ್ನೋ: ಜಾಮೀನಿನ ಮೇಲೆ ಹೊರಬಂದಿದ್ದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯೊಬ್ಬ ತನ್ನ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಯ ತಂದೆಯನ್ನು ತನ್ನ ಮೂವರು ಸಹಚರರೊಂದಿಗೆ ಹತ್ಯೆಗೈದ ಘಟನೆ ಹತ್ರಸ್‌ ನ ಸಸ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯ ತಂದೆ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆತನ ಪತ್ನಿ ಮತ್ತು ಪುತ್ರಿ ಊಟ ತೆಗೆದುಕೊಂಡ ಬಂದ ಸಂದರ್ಭದಲ್ಲಿ ಅಲ್ಲಿಗೆ ಬಿಳಿ ಕಾರಿನಲ್ಲಿ ತನ್ನ ಮೂವರು ಸಹಚರರ ಜತೆಗೆ ಆಗಮಿಸಿದ್ದ ಪ್ರಮುಖ ಆರೋಪಿ ಗೌರವ್ ಶರ್ಮ ಆತನ ವಿರುದ್ಧ ಗುಂಡು ಹಾರಿಸಿದ್ದ. ಆರೋಪಿ ಸಮಾಜವಾದಿ ಪಕ್ಷದ ನಾಯಕನೂ ಆಗಿದ್ದಾನೆ.

ಹತ್ಯೆಗೀಡಾದ ವ್ಯಕ್ತಿ ಶರ್ಮಾನ ವಿರುದ್ಧ 2018ರಲ್ಲಿ ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಿ ದೂರು ನೀಡಿದ್ದ. ಇದರ ನಂತರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಶರ್ಮ ಒಂದು ತಿಂಗಳ ನಂತರ ಜಾಮೀನಿನ ಮೇಲೆ ಹೊರಬಂದಿದ್ದ.

ಹತ್ಯೆ ಸಂಬಂಧ ಪೊಲೀಸರು ಲಲಿತ್ ಶರ್ಮ ಎಂಬಾತನನ್ನು ಬಂಧಿಸಿದ್ದು, ಗೌರವ್ ಶರ್ಮ, ನಿಖಿಲ್ ಶರ್ಮ ಹಾಗೂ ರೋಹಿತಾಕ್ಷ್ ಶರ್ಮ ತಲೆಮರೆಸಿಕೊಂಡಿದ್ದಾರೆ. ಗೌರವ್ ಶರ್ಮ ಹಾಗೂ ಮೃತ ವ್ಯಕ್ತಿಯ ಪುತ್ರಿಯ ವಿವಾಹ ನಡೆಸಲು ಕೆಲ ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತಾದರೂ ಅದ್ಯಾವುದೋ ಕಾರಣಕ್ಕೆ ಅದು ರದ್ದುಗೊಂಡಿತ್ತು.

ಇದರಿಂದ ಗೌರವ್ ಸಿಟ್ಟುಗೊಂಡಿದ್ದನೆನ್ನಲಾಗಿದೆ. ಜಾಮೀನಿನ ಮೇಲೆ ಕಳೆದ ವರ್ಷ ಹೊರಬಂದ ನಂತರ ಆತ ಬೇರೊಂದು ಯುವತಿಯನ್ನು ವಿವಾಹವಾಗಿದ್ದ. ಸೋಮವಾರ ಗೌರವ್ ಪತ್ನಿ ಮತ್ತು ಸಂತ್ರಸ್ತೆ ಮುಖಾಮುಖಿಯಾಗಿದ್ದರೆನ್ನಲಾಗಿದೆ. ಈ ಘಟನೆಯಿಂದಾಗಿ ಹತ್ಯೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News