ಗನ್ ತರಬೇತಿಯ ವೇಳೆ ಅನಿರೀಕ್ಷಿತ ಗುಂಡು ಸಿಡಿತ: ಬಿಎಸ್ಎಫ್ ಯೋಧ ಮೃತ್ಯು
Update: 2021-03-03 14:26 GMT
ಜೈಸಲ್ಮೇರ್,ಮಾ.3: ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ತಾಲೂಕಿನ ಲಾಥಿ ಫೈರಿಂಗ್ ರೇಂಜ್ನಲ್ಲಿ ಗನ್ ತರಬೇತಿ ಸಂದರ್ಭ ಅವಘಡ ಸಂಭವಿಸಿ ಓರ್ವ ಬಿಎಸ್ಎಫ್ ಯೋಧ ಕೊಲ್ಲಲ್ಪಟ್ಟಿದ್ದು,ಇತರ ನಾಲ್ವರು ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿದೆ. ಗನ್ವೊಂದರ ಮುಂಭಾಗದ ಮಝಲ್ನಲ್ಲಿ ಅನಿರೀಕ್ಷಿತವಾಗಿ ಗುಂಡು ಸಿಡಿದ ಪರಿಣಾಮ ತರಬೇತಿಯಲ್ಲಿ ಭಾಗವಹಿಸಿದ್ದ ಐವರು ಬಿಎಸ್ಎಫ್ ಸಿಬ್ಬಂದಿಗಳು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ತಕ್ಷಣವೇ ಪೋಖ್ರಾನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು. ಆದರೆ ಯೋಧ ಸತೀಶ್ ಕುಮಾರ್ (32) ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.